ಶ್ರೀನಗರ: ಅಮರನಾಥ ಯಾತ್ರೆಯ ಯಾತ್ರಿಕರನ್ನು ಏರ್ಲಿಫ್ಟ್ ಮಾಡುವಂತೆಭಾರತೀಯ ವಾಯುಪಡೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮನವಿ ಮಾಡಿದೆ. ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್ಕೋಟ್ ಅಥವಾ ದೆಹಲಿಗೆ ತಲುಪಿಸುವ ಮೂಲಕ ಸುರಕ್ಷಿತವಾಗಿ ಅವರ ಊರುಗಳಿಗೆ ಸೇರಲು ಅನುವಾಗುವಂತೆ ಕೋರಿದೆ.
ದೇಶದ ಪ್ಯಾರಾಮಿಲಿಟರಿ ಪಡೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿ–17 ಸಾಗಾಣಿಕೆ ವಿಮಾನವು ಅಮರನಾಥ ಯಾತ್ರಿಕರನ್ನು ಕಾಶ್ಮೀರದಿಂದ ಹೊರಗೆ ಕರೆದೊಯ್ಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿಎಎನ್ಐ ವರದಿ ಮಾಡಿದೆ.
ಬೋಯಿಂಗ್ ನಿರ್ಮಿತ ಸಿ–17 ಗ್ಲೋಬ್ಮಾಸ್ಟರ್ ವಿಮಾನವು ಒಮ್ಮೆಗೆ 230 ಪ್ರಯಾಣಿಕರನ್ನು ಏರ್ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ರಷ್ಯಾದ ಇಲ್ಯುಷಿನ್–76 ವಿಮಾನಕ್ಕೆ ಹೋಲಿಸಿದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಿ–17 ಕಡಿಮೆ ಸಮಯದಲ್ಲಿ ಪ್ರಯಾಣ ಪೂರೈಸುತ್ತದೆ.
ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಆತಂಕ ದಟ್ಟವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.