ತಿರುವನಂತಪುರ: ಶ್ರೀಲಂಕಾದಿಂದ ಇಸ್ಲಾಮಿಕ್ ಸ್ಟೇಟ್ನ 15 ಉಗ್ರರು ಇರುವ ಬೋಟ್ ಲಕ್ಷದ್ವೀಪದತ್ತ ಹೊರಟಿದ್ದು, ಸಂಭಾವ್ಯ ವಿಧ್ವಂಸಕ ಕೃತ್ಯದ ಬಗ್ಗೆ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಹೀಗಾಗಿ ಕೇರಳದ ಕರಾವಳಿಯಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
‘ಹಡಗುಗಳು ಹಾಗೂ ನೌಕಾಪಡೆ ವಿಮಾನಗಳನ್ನು ನಿಯೋಜನೆ ಮಾಡಲಾಗಿದ್ದು, ಕರಾವಳಿಯಲ್ಲಿ ಭಾರಿ ನಿಗಾ ಇಡಲಾಗಿದೆ’ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.
’ಇಂತಹ ಎಚ್ಚರಿಕೆ ಸಂದೇಶಗಳು ಬರುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಈ ಬಾರಿ ಉಗ್ರರ ಸಂಖ್ಯೆ ಹಾಗೂ ಅವರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿ ಇರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ‘ ಎಂದು ಕರಾವಳಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
’ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರ ಆತ್ಮಾಹುತಿ ದಾಳಿ ಸಂಭವಿಸಿದ ಕ್ಷಣದಿಂದಲೇ ನಾವು ಎಚ್ಚರ ವಹಿಸಿದ್ದೇವೆ. ಸಂಶಯಾಸ್ಪದವಾಗಿ ಸಂಚರಿಸುವ ಬೋಟ್, ಹಡಗುಗಳು ಕಂಡುಬಂದಲ್ಲಿ ಎಚ್ಚರಿಕೆಯಿಂದ ಇರುವಂತೆ ಮೀನುಗಾರಿಕೆಗೆ ತೆರಳುವವರಿಗೆ ಹಾಗೂ ಇತರ ಹಡಗುಗಳ ಮಾಲೀಕರಿಗೆ ತಿಳಿಸಲಾಗಿದೆ‘ ಎಂದು ಇವೇ ಮೂಲಗಳು ಹೇಳಿವೆ.