ತಿರುವನಂತಪುರ: ಕಾರ್ಯಕರ್ತರು, ಹಿತೈಷಿಗಳಿಂದ ದೇಣಿಗೆ ಸಂಗ್ರಹಿಸಿ ವಾಹನವನ್ನು ಖರೀದಿಸಿ ಕೊಡುವ ಯುವ ಕಾಂಗ್ರೆಸ್ ಘಟಕದ ನಿರ್ಧಾರಕ್ಕೆ ಕೇರಳದ ಸಂಸದೆ ರಮ್ಯಾ ಹರಿದಾಸ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಯುವಕಾಂಗ್ರೆಸ್ ತೀರ್ಮಾನಕ್ಕೆ ಕೇರಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರು ವಿರೋಧ ವ್ಯಕ್ತಪಡಿಸಿದ ಹಿಂದೆಯೇ ಅಸಮ್ಮತಿ ವ್ಯಕ್ತಪಡಿಸಿ ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.
ಅವರು ಪ್ರತಿನಿಧಿಸುವ ಅಲತ್ತೂರು ಕ್ಷೇತ್ರದ ಯುವ ಕಾಂಗ್ರೆಸ್ ಘಟಕ, ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ತಲಾ ₹ 1000 ದೇಣಿಗೆ ಸಂಗ್ರಹಿಸಿ, ₹ 14 ಲಕ್ಷ ಮೌಲ್ಯದ ವಾಹನ ಕೊಡಿಸಲು ತೀರ್ಮಾನಿಸಿತ್ತು.
ಆದರೆ, ಸಂಸದೆಯಾಗಿ ರಮ್ಯಾ ₹ 1.9 ಲಕ್ಷ ಭತ್ಯೆ ಪಡೆಯುತ್ತಿದ್ದು, ಬಡ್ಡಿರಹಿತವಾದ ವಾಹನ ಸಾಲವನ್ನು ಪಡೆಯಲು ಅರ್ಹರಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಾಹನ ಕೊಡುಗೆ ನಿರ್ಧಾರ ಟೀಕೆಗೆ ಒಳಗಾಗಿತ್ತು.