ತಿರುವನಂತಪುರಂ: ಭಾರಿ ಮಳೆ, ಪ್ರವಾಹದಿಂದ ನಲುಗಿದ್ದ ರಾಜ್ಯದ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುವಲ್ಲಿ ಕೇರಳ ಪ್ರವಾಸಿ ಮೇಳವು (ಕೆಟಿಎಂ) ಯಶಸ್ವಿಯಾಗಿದೆ.
ಜಾಗತಿಕ ಪ್ರವಾಸೋದ್ಯಮದ ಭಾಗಿದಾರರು ಗರಿಷ್ಠ ಪ್ರಮಾಣದಲ್ಲಿ ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ವಿಶ್ವದಾದ್ಯಂತ ಪ್ರವಾಸಿಗರಲ್ಲಿ ಇರುವ ದೃಢ ವಿಶ್ವಾಸಕ್ಕೆ ಇದು ದ್ಯೋತಕವಾಗಿದೆ.
‘ರಾಜ್ಯದ ಜನರು ನೈಸರ್ಗಿಕ ಪ್ರಕೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ, ಮೂಲ ಸೌಕರ್ಯಗಳೆಲ್ಲ ಭಾರಿ ನಷ್ಟ ಕಂಡಿದ್ದರೂ ಪ್ರವಾಸೋದ್ಯಮವು ಮತ್ತೆ ಚೇತರಿಕೆ ಹಾದಿಗೆ ಮರಳುತ್ತಿರುವುದು ನಿಜಕ್ಕೂ ಅದ್ಭುತ ಘಟನೆಯಾಗಿದೆ’ ಎಂದು ರಾಜ್ಯದ ಪ್ರವಾಸೋದ್ಯಮ ಕಾರ್ಯದರ್ಶಿ ರಾಣಿ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.
‘ಮೇಳದ ಯಶಸ್ಸು ರಾಜ್ಯದ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರಲ್ಲಿ ಮರಳಿ ಭರವಸೆ ಮೂಡಿಸಿದೆ’ ಎಂದು ಪ್ರವಾಸೋದ್ಯಮ ನಿರ್ದೇಶಕ ಪಿ. ಬಾಲಾಕಿರಣ್ ಹೇಳಿದ್ದಾರೆ.
ಮೇಳದ ಒಟ್ಟಾರೆ ಯಶಸ್ಸು ದೇಶ – ವಿದೇಶಗಳ ಪ್ರವಾಸಿಗರು ಮತ್ತು ಭಾಗಿದಾರರಲ್ಲಿಯೂ ಆತ್ಮವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ.