ಮುಂಬೈ: ಬಾಂದ್ರಾದ ಗರೀಬ್ ನಗರ ಪ್ರದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಕ್ರಿಯೆಗೆ ಮುಸ್ಲಿಂ ಸಮುದಾಯದವರು ನೆರವಾಗಿದ್ದಾರೆ.
ರಾಜಸ್ಥಾನದ ಪ್ರೇಮಚಂದ್ರ ಬುದ್ಧಲಾಲ್ ಮಹಾವೀರ್(68) ಮೃತಪಟ್ಟವರು. ಲಾಕ್ಡೌನ್ ಇರುವುದರಿಂದ ಅವರ ಸಂಬಂಧಿಕರಿಗೆ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ ಹೀಗಾಗಿ, ಅಂತ್ಯಕ್ರಿಯೆ ನೆರವೇರಿಸಲು ಮೃತರ ಮಗನಿಗೆ ನೆರಹೊರೆಯ ಮುಸ್ಲಿಮರು ನೆರವು ನೀಡಿದ್ದಾರೆ.
‘ರಾಮ್ ನಾಮ್ ಸತ್ಯ ಹೈ’ ಎಂದು ಜಪಿಸುತ್ತಾ ಮುಸ್ಲಿಂ ಸಮುದಾಯದವರು ಸ್ಮಶಾನಕ್ಕೆ ಶವ ಹೊತ್ತು ಸಾಗಿದ್ದಾರೆ.
‘ಇಂತಹ ಸಮಯದಲ್ಲಿ, ಧಾರ್ಮಿಕ ಅಡೆತಡೆಗಳನ್ನು ಮೀರಿದ ಮಾನವೀಯತೆಯನ್ನು ನಾವು ತೋರಿಸಬೇಕು’ ಎಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಯೂಸೂಫ್ ಸಿದ್ದಿಕಿ ಷೈಕ್ ತಿಳಿಸಿದ್ದಾರೆ.
‘ಅಂತಿಮ ವಿಧಿವಿಧಾನದ ಜೊತೆ ಮರಣ ಸಂಬಂಧಿ ದಾಖಲೆ ತೆಗೆದುಕೊಳ್ಳಲು ನೆರೆಮನೆಯವರು ನೆರವಾದರು’ ಎಂದು ಮೃತರ ಮಗ ಮೋಹನ್ ಮಹಾವೀರ್ ತಿಳಿಸಿದ್ದಾರೆ.
ಪ್ರೇಮಚಂದ್ರ ಬುದ್ಧಲಾಲ್ ಮಹಾವೀರ್ ಕಳೆದ ಶುಕ್ರವಾರ ಮೃತಪಟ್ಟಿದ್ದರು. ಮರು ದಿನ ಶನಿವಾರವೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಘಟನೆ ತಡವಾಗಿ ವರದಿಯಾಗಿದೆ.