ನವದೆಹಲಿ: ಲೋಕಪಾಲರ ನೇಮಕ ಕುರಿತಂತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಸಂಬಂಧ ಲೋಕಪಾಲ ಆಯ್ಕೆ ಸಮಿತಿ ಸಭೆ ದಿನಾಂಕವನ್ನು 10 ದಿನಗಳ ಒಳಗೆ ತಿಳಿಸುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.
’ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಪ್ರಕಾಶ್ ದೇಸಾಯಿ ನೇತೃತ್ವದ ಶೋಧನಾ ಸಮಿತಿಯು ಲೋಕಪಾಲ ಸಂಸ್ಥೆಯ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರ ನೇಮಕಕ್ಕಾಗಿ ಒಟ್ಟು ಮೂರು ಪ್ಯಾನೆಲ್ಗಳ ಹೆಸರುಗಳನ್ನು ಶಿಫಾರಸು ಮಾಡಿದೆ‘ ಎಂದು ಕೆ.ಕೆ.ವೇಣುಗೋಪಾಲ್ ಅವರು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.
’ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ಸಭೆಯನ್ನು ಶೀಘ್ರವೇ ಆಯೋಜನೆ ಮಾಡಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ತಿಳಿಸುವುದಾಗಿಯೂ‘ ಅವರು ಹೇಳಿದರು.
ಶೋಧನಾ ಸಮಿತಿ ಶಿಫಾರಸಿನಲ್ಲಿರುವ ಲೋಕಪಾಲ ಮತ್ತು ಇತರ ಇಬ್ಬರು ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸುವಂತೆ ನಿರ್ದೇಶನ ನೀಡಲು ನ್ಯಾಯಪೀಠ ನಿರಾಕರಿಸಿತು.