ನವದೆಹಲಿ: ಬಿಹಾರದ ಮುಜಫ್ಫರ್ಪುರ ಬಾಲಿಕಾ ಗೃಹದಲ್ಲಿ ನಡೆದಿದೆ ಎನ್ನಲಾದ 11 ಬಾಲಕಿಯರ ಹತ್ಯೆಗೆ ಸಂಬಂಧಿಸಿದ ತನಿಖಾ ವರದಿಯ ವಸ್ತುಸ್ಥಿತಿ ವರದಿಯನ್ನು ಜೂನ್ 3ರೊಳಗೆ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೂನ್ 3ರಂದು ರಜಾಕಾಲದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವು ಹೇಳಿದೆ.
ಸಿಬಿಐ ಪರವಾಗಿ ಕೋರ್ಟ್ನಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ‘11 ಮಕ್ಕಳ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ, ಸಮಾಧಿ ಸ್ಥಳದಿಂದ ಕೆಲ ಮೂಳೆಗಳನ್ನು ವಶಪಡಿಸಿಕೊಂಡಿದೆ. ಆದಾಗ್ಯೂ ಈ ಪ್ರಕರಣದ ತನಿಖೆ ಜೂನ್ 3ರೊಳಗೆ ಮುಗಿಯುವ ಸಾಧ್ಯತೆ ಕಡಿಮೆ’ ಎಂದರು.
11 ಬಾಲಕಿಯರೂ ಪ್ರಮುಖ ಆರೋಪಿ ಬ್ರಿಜೇಶ್ ಠಾಕೂರ್ ಮತ್ತು ಆತನ ಸಹವರ್ತಿಗಳಿಂದಲೇ ಕೊಲೆಯಾಗಿದ್ದಾರೆ. ಬಾಲಕಿಯರನ್ನು ಸಮಾಧಿ ಮಾಡಲಾದ ಸ್ಥಳಗಳಿಂದ ರಾಶಿ ರಾಶಿ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಮೇ 3ರಂದು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.