ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸಲು ವಿರೋಧ ಪಕ್ಷಗಳಿಗೆ ಕಡಿಮೆ ಸಮಯ ನೀಡುವ ಮೂಲಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದುಲೋಕಸಭೆಯಲ್ಲಿ ಕಾಂಗ್ರೆಸ್ನ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಚರ್ಚೆಯನ್ನು ಪ್ರಶ್ನೋತ್ತರ ಅವಧಿ ಎಂಬಂತೆ ಪರಿಗಣಿಸಲಾಗದು. ತಮ್ಮ ಪಕ್ಷಕ್ಕೆ ನೀಡಲಾಗಿರುವ 32 ನಿಮಿಷ ತುಂಬಾ ಕಡಿಮೆ. ರೈತರು, ಮಹಿಳೆಯರು ಮತ್ತು ದಲಿತರಿಗೆ ಸಂಬಂಧಿಸಿದ ವಿಚಾರಗಳನ್ನು ವಿವರಿಸಲು ಒಬ್ಬೊಬ್ಬ ಸಂಸದನಿಗೆ ಕೆಲವೇ ನಿಮಿಷ ನೀಡಿದರೆ ಸಾಕಾಗದು ಎಂದು ಅವರು ಹೇಳಿದರು.
ಕೆಲವು ಪಕ್ಷಗಳಿಗೆ 25 ನಿಮಿಷ ಕೊಟ್ಟಿದ್ದರೆ ಕೆಲವು ಪಕ್ಷಗಳಿಗೆ 15 ನಿಮಿಷ ಮಾತ್ರ ನೀಡಲಾಗಿದೆ. ರೈತರು, ಮಹಿಳೆಯರು, ದಲಿತರು ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಒಂದು ನಿಮಿಷದಲ್ಲಿ ಬಿಚ್ಚಿಡಲು ಸಾಧ್ಯವೇ? ಒಬ್ಬೊಬ್ಬ ಸಂಸದನಿಗೆ ಕನಿಷ್ಠ ಅರ್ಧ ಗಂಟೆಯಾದರೂ ಬೇಕು. ಅತ್ಯಂತ ದೊಡ್ಡ ಪಕ್ಷಕ್ಕೆ 32 ನಿಮಿಷ ನೀಡಲಾಗಿದೆ. ಇದೆಲ್ಲವನ್ನೂ ನಿಯಮ ಪ್ರಕಾರವೇ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಖರ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಹೆಚ್ಚು ಸಮಯ ಕೊಡುವುದಕ್ಕಾಗಿ ಸ್ಪೀಕರ್ ಅವರು ನಿಯಮಗಳಿಗೆ ತಿದ್ದುಪಡಿ ತರಬಹುದು. ಸಣ್ಣ ಮಸೂದೆಗಳ ಮೇಲಿನ ಚರ್ಚೆಗೆ ಆರರಿಂದ ಏಳು ತಾಸು ಕೊಡಲಾಗುತ್ತದೆ ಎಂದು ಅವರು ಹೇಳಿದರು.
**
ವಿವಿಧ ಪಕ್ಷಗಳಿಗೆ ನೀಡಲಾಗಿದ್ದ ಸಮಯ
ಬಿಜೆಪಿ: 3 ಗಂಟೆ 33 ನಿಮಿಷ
ಕಾಂಗ್ರೆಸ್: 38 ನಿಮಿಷ
ಎಐಎಡಿಎಂಕೆ: 29 ನಿಮಿಷ
ಟಿಎಂಸಿ: 27 ನಿಮಿಷ
ಬಿಜೆಡಿ: 15 ನಿಮಿಷ
ಟಿಡಿಪಿ: 13 ನಿಮಿಷ
ಟಿಆರ್ಎಸ್: 9 ನಿಮಿಷ
ಒಟ್ಟು: ಅಂದಾಜು 7 ಗಂಟೆ
***
66 ವರ್ಷಗಳಲ್ಲಿ 27 ಅವಿಶ್ವಾಸ ಗೊತ್ತುವಳಿಗಳು
ಇಂದಿರಾ ವಿರುದ್ಧವೇ ಹೆಚ್ಚು ಗೊತ್ತುವಳಿಗಳು
15 ಇಂದಿರಾ ಗಾಂಧಿ
3 ಲಾಲ್ ಬಹದ್ದೂರ್ ಶಾಸ್ತ್ರಿ
3 ಪಿ.ವಿ.ನರಸಿಂಹ ರಾವ್
2 ಮೊರಾರ್ಜಿ ದೇಸಾಯಿ
1 ಜವಾಹರ್ ಲಾಲ್ ನೆಹರೂ
1 ರಾಜೀವ್ ಗಾಂಧಿ
1 ಅಟಲ್ ಬಿಹಾರಿ ವಾಜಪೇಯಿ
1 ನರೇಂದ್ರ ಮೋದಿ
**
* 1963ರಲ್ಲಿ ಮೊದಲ ಬಾರಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿತ್ತು. ಆಗ ಜವಾಹರ್ ಲಾಲ್ ನೆಹರೂ ಪ್ರಧಾನಿಯಾಗಿದ್ದರು
* 1979ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ನಂತರ ಪ್ರಧಾನಿ ಹುದ್ದೆಗೆ ಮೊರಾರ್ಜಿ ದೇಸಾಯಿ ಅವರು ರಾಜೀನಾಮೆ ನೀಡಿದ್ದರು. ಆ ರೀತಿ ಪ್ರಧಾನಿಯೊಬ್ಬರು ರಾಜೀನಾಮೆ ನೀಡಿದ್ದು ಈವರೆಗೆ ಅದೊಂದೇ ಬಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.