ನರೇಂದ್ರ ಕುಮಾರ್ ಹತ್ಯೆ ಘಟನೆ ಬಗ್ಗೆ ವಿವರಿಸಿದ ಅವರು, ‘ಬೇಲಿಗೆ ಅಡ್ಡಲಾಗಿ ಆಳೆತ್ತರ ಬೆಳೆದಿದ್ದ ಹುಲ್ಲು ಕತ್ತರಿಸುವ ಕಾರ್ಯದಲ್ಲಿ ಗಸ್ತುಪಡೆ ತೊಡಗಿತ್ತು. ಸಾಮಾನ್ಯವಾಗಿ ಇಂತಹ ಕೆಲಸ ಮಾಡುತ್ತಿರುವ ವೇಳೆ ಪಾಕ್ ಪಡೆಗಳು ಗಾಳಿಯಲ್ಲಿ ಗುಂಡುಹಾರಿಸುತ್ತವೆ. ನಾವು ಕೆಲಸದಿಂದ ಹಿಂದೆ ಸರಿದು ಅವರ ಬಳಿ ಮಾತುಕತೆ ನಡೆಸುತ್ತೇವೆ. ನಂತರ ಹುಲ್ಲು ಕತ್ತರಿಸುವ ಕಾರ್ಯ ಪುನರಾರಂಭಗೊಳ್ಳುತ್ತದೆ. ಆದರೆ, ಈ ಬಾರಿ ಅವರು ಗುಂಡಿನ ದಾಳಿ ನಡೆಸಿದರು. ನಮ್ಮ ಯೋಧರು ಹಿಂದೆ ಸರಿದರು. ನಂತರ ಒಬ್ಬ ಯೋಧ ನಾಪತ್ತೆಯಾಗಿರುವುದು ತಿಳಿಯಿತು. ಪರಿಶೀಲಿಸಲು ತೆರಳಿ ನಮ್ಮ ಯೋಧರಿಗೆ, ಕಾಣೆಯಾಗಿರುವ ಯೋಧ ಧರಿಸಿದ್ದ ಹೆಲ್ಮೆಟ್ ಮತ್ತು ಟೋಪಿಪತ್ತೆಯಾಯಿತು. ಜತೆಗೆ, ಗಡಿಯಾಚೆಗಿನ ಕೆಲವು ವ್ಯಕ್ತಿಗಳು ಅವರನ್ನು ಎಳೆದುಕೊಂಡು ಹೋಗಿರುವ ಬಗ್ಗೆ ಕುರುಹುಗಳು ದೊರೆತವು. ಅಂತರರಾಷ್ಟ್ರೀಯ ಗಡಿಯಾಗಿರುವುದರಿಂದ ನಾವದನ್ನು ದಾಟಿ ಮುಂದೆ ಹೋಗುವುದಿಲ್ಲ. ಸ್ವಲ್ಪ ಸಮಯದ ಬಳಿಕ ಹುಡುಕಾಟ ನಡೆಸಲು ಆ ಬದಿಯಿಂದ ಅನುಮತಿ ದೊರೆಯಿತು. ನಾಪತ್ತೆಯಾಗಿದ್ದ ಯೋಧನ ಮೃತದೇಹ ಕಂಡುಬಂತು. ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಎದೆಯಲ್ಲಿ ಗುಂಡುತಗುಲಿದ ಗಾಯಗಳಿದ್ದು, ಕತ್ತು ಸೀಳಿದ ಸ್ಥಿತಿಯಲ್ಲಿತ್ತು’ ಎಂದು ಹೇಳಿದ್ದಾರೆ.