ನವದೆಹಲಿ: ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶನಿವಾರ ದೆಹಲಿಯಲ್ಲಿ ವಿಚಾರಣೆಗೊಳಪಡಿಸಲಾಗುವುದು.
ಭಾರತೀಯ ಸೇನೆ ಮತ್ತು ಗುಪ್ತಚರ ಅಧಿಕಾರಿಗಳು ಈ ವಿಚಾರಣೆ ನಡೆಸಲಿದ್ದು ಇಡೀ ಘಟನೆಯನ್ನು ಮರುರೂಪಿಸುವಂತೆ ಅಭಿನಂದನ್ಗೆ ಹೇಳಲಾಗುವುದು.
ಏನಿದು ಡಿಬ್ರೀಫಿಂಗ್? ಪಾಕ್ ಅಧಿಕಾರಿಗಳಲ್ಲಿ ಅಭಿನಂದನ್ ಏನೆಲ್ಲಾ ಹೇಳಿದ್ದಾರೆ ಎಂಬುದರ ಬಗ್ಗೆ ಇಲ್ಲಿ ಕೇಳಲಾಗುತ್ತದೆ.ವಿಮಾನ ಪತನವಾಗಿದ್ದು ಹೇಗೆ? ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದು ಹೇಗೆ ? ಪಾಕ್ ಗುಪ್ತಚರ ಸಂಸ್ಥೆ ವಿಚಾರಣೆ ಮಾಡಿತ್ತೇ? ಪಾಕ್ ವಶದಲ್ಲಿದ್ದಾಗ ಹಿಂಸೆ ನೀಡಲಾಯಿತೇ? ಎಂಬ ವಿಷಯಗಳನ್ನು ಅಭಿನಂದನ್ ಅವರಲ್ಲಿ ಕೇಳಲಾಗುವುದು.
ಈ ರೀತಿ ವಿಚಾರಣೆ ನಡೆಸುವಾಗ ಮನೋವೈದ್ಯರು ಕೂಡಾ ಇರುತ್ತಾರೆ. ಅಭಿನಂದನ್ ಅವರ ದೈಹಿಕ ಮತ್ತು ಮಾನಸಿಕ ತಪಾಸಣೆ ನಡೆಸಿದ ನಂತರ ಮಾಧ್ಯಮಗಳ ಮುಂದೆ ಏನು ಹೇಳಬೇಕು ಎಂಬುದರ ಬಗ್ಗೆಯೂ ಇಲ್ಲಿ ಹೇಳಿಕೊಡಲಾಗುವುದು.
ಡೀಬ್ರೀಫಿಂಗ್ ಪ್ರಕ್ರಿಯೆಯಲ್ಲಿ ವಾಯುಸೇನೆ, ಗುಪ್ತಚರ ಅಧಿಕಾರಿಗಳು, ರಿಸರ್ಚ್ ಅನಾಲಿಸಿಸ್ ವಿಂಗ್ನ (ರಾ) ಸಂಸ್ಥೆ ,ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅಭಿನಂದನ್ ಅವರನ್ನು ಗುಪ್ತ ಸ್ಥಳವೊಂದರಲ್ಲಿ ವಿಚಾರಣೆಗೊಳಪಡಿಸುತ್ತಾರೆ.