ತಿರುವನಂತಪುರ: ಕೇಂದ್ರ ಸರ್ಕಾರವು ಕೇರಳ ಸರ್ಕಾರದ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ.
‘ಪ್ರವಾಹ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ವಿದೇಶಕ್ಕೆ ತೆರಳಲು ಕೇರಳದ ಮಂತ್ರಿಗಳಿಗೆ ಕೇಂದ್ರ ಸರ್ಕಾರಅನುಮತಿ ನೀಡದೆ ಇರುವುದು ಇದಕ್ಕೆ ಉತ್ತಮ ಉದಾಹರಣೆ’ ಎಂದು ಅವರು ಹೇಳಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಐದು ದಿನಗಳ ಪ್ರವಾಸ ಕೈಗೊಂಡು ಸೋಮವಾರ ಮರಳಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
‘ಗುಜರಾತ್ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದಾಗ ವಿದೇಶದಿಂದ ಹಣಕಾಸಿನ ನೆರವು ಪಡೆಯಲು ಕೇಂದ್ರವು ಅನುಮತಿ ನೀಡಿತ್ತು’ ಎಂದು ಅವರು ಹೇಳಿದ್ದಾರೆ.
‘ಕೇರಳದಲ್ಲಿ ಪ್ರವಾಹ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ₹700 ಕೋಟಿ ನೆರವು ನೀಡುವುದಾಗಿ ಯುಎಇ ಭರವಸೆ ನೀಡಿದೆ’ ಎಂದೂ ಅವರು ತಿಳಿಸಿದ್ದಾರೆ.