ನವದೆಹಲಿ: ಭಾರತವು ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ತಿರುಗೇಟು ನೀಡುವ ಸಾಮರ್ಥ್ಯ ಎಂತಹದ್ದೇ ಪರಿಸ್ಥಿತಿಯಲ್ಲೂ ಭಾರತಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
#WATCH India wants peace but when instigated, India is capable of giving a befitting reply, be it any kind of situation: Prime Minister Narendra Modi pic.twitter.com/rJc0STCwBM
ಚೀನಾ ಪಡೆಗಳೊಂದಿಗೆ ಸೋಮವಾರ ರಾತ್ರಿ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಒಬ್ಬರು ಸೇನಾಧಿಕಾರಿ ಸೇರಿದಂತೆ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವುದಕ್ಕೂ ಮುನ್ನ ಹುತಾತ್ಮ ಯೋಧರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ15 ರಾಜ್ಯಗಳ ಮುಖ್ಯಮಂತ್ರಿಗಳು ಮೋದಿ ಸಂವಾದದಲ್ಲಿ ಭಾಗಿಯಾಗಿದ್ದು, ಇವರೆಲ್ಲ ಮೌನಾಚರಣೆ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಇದರೊಂದಿಗೆ, ಚೀನಾ ಪಡೆಗಳ ಜತೆ ಲಡಾಖ್ ಗಡಿಯಲ್ಲಿ ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರು ಆ ವಿಷಯದ ಬಗ್ಗೆ ಬಹಿರಂಗ ಹೇಳಿಕೆ ನೀಡಿದಂತಾಗಿದೆ.
ಯೋಧರ ಬಲಿದಾನ ವ್ಯರ್ಥವಾಗದು: ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ದೇಶದ ಜನತೆಗೆ ಭರವಸೆ ನೀಡಲು ಬಯಸುತ್ತೇನೆ. ಭಾರತ ಶಾಂತಿ ಬಯಸುವುದು ನಿಜ. ಆದರೆ ನಮ್ಮ ತಂಟೆಗೆ ಬಂದರೆ ಎಂಥ ಪರಿಸ್ಥಿತಿಯಲ್ಲೂ ತಕ್ಕ ತಿರುಗೇಟು ನೀಡುವ ಸಾಮರ್ಥ್ಯವಿದೆ ಎಂದು ಮೋದಿ ಹೇಳಿದರು.
ಭಾರತದ ಅಖಂಡತೆ ಮತ್ತು ಸಾರ್ವಭೌಮತೆಯು ನಮಗೆ ಪರಮೋಚ್ಚವಾದುದಾಗಿದೆ. ಇದನ್ನು ರಕ್ಷಿಸುವಲ್ಲಿ ಒಂದಿನಿತೂ ಹಿಂದೇಟು ಹಾಕುವುದಿಲ್ಲ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಗಡಿ ಸಂಘರ್ಷದಲ್ಲಿ ಹುತಾತ್ಮರಾದವರ ಬಗ್ಗೆ ನಮಗೆಲ್ಲ ಹೆಮ್ಮೆಯಿದೆ ಎಂದು ಮೋದಿ ಹೇಳಿದರು.