ಕರನಾಲ್ (ಹರಿಯಾಣ): ಇಮ್ರಾನ್ ಖಾನ್ ಅವರೇ, ನೀವುನಿಜವಾಗಿಯೂ ಭಯೋತ್ಪಾದನೆ ವಿರುದ್ಧ ಹೋರಾಡುವುದಾದರೆ, ನಮ್ಮ ಸೇನೆಯನ್ನು ನಿಮ್ಮ ನೆರವಿಗಾಗಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಲ್ಲಿ ಭಾನುವಾರ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ಇಮ್ರಾನ್ ಖಾನ್ ಅವರೇ, ನಿಮಗೊಂದು ಪರಿಹಾರ ಸೂಚಿಸುತ್ತೇನೆ. ಭಯೋತ್ಪಾದನೆ ವಿರುದ್ಧ ನೀವು ಗಂಭೀರವಾಗಿ ಹೋರಾಡುವುದಾದರೆ ಭಾರತವು ನಿಮ್ಮ ನೆರವಿಗೆ ಬರಲಿದೆ. ನೀವು ಬಯಸುವುದಾದರೆ, ನಮ್ಮ ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ’ ಎಂದು ರಾಜನಾಥ್ ಹೇಳಿದ್ದಾರೆ.
‘ಪಾಕಿಸ್ತಾನ ತುಂಡಾಗುತ್ತದೆ’:‘ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ನಾವು ಹೋರಾಡುತ್ತೇವೆ ಎಂದು ಇಮ್ರಾನ್ ಖಾನ್ ಹೇಳುತ್ತಲೇ ಇರುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎನ್ನುತ್ತಿರುತ್ತಾರೆ. ಇದರಿಂದ ನಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
‘1947ರಲ್ಲಿ ಭಾರತವನ್ನು ಇಬ್ಭಾಗ ಮಾಡಿದಿರಿ. 1971ರಲ್ಲಿ ಪಾಕಿಸ್ತಾನವೇ ಇಬ್ಭಾಗವಾಯಿತು. ಈಗಿನ ಪರಿಸ್ಥಿತಿ ಹೀಗೇ ಮುಂದುವರಿದರೆ, ಪಾಕಿಸ್ತಾನವು ಮತ್ತಷ್ಟು ತುಂಡುಗಳಾಗುವುದನ್ನು ಯಾರೂ ತಡೆಯಲಾರರು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
***
ಕಾಶ್ಮೀರವನ್ನು ಪಡೆದುಕೊಳ್ಳುತ್ತೇವೆ ಎಂಬುದನ್ನು ಪಾಕಿಸ್ತಾನವು ಮರೆತುಬಿಡಬೇಕು. ಕಾಶ್ಮೀರವನ್ನು ಪಡೆದುಕೊಳ್ಳುವುದು ಇರಲಿ, ಆ ಯೋಚನೆಯನ್ನೂ ಮಾಡಬಾರದು – ರಾಜನಾಥ್ ಸಿಂಗ್, ರಕ್ಷಣಾ ಸಚಿವ