ಹೈದರಾಬಾದ್: ‘ಹೈದರಾಬಾದ್ನ ಪಶುವೈದ್ಯೆಯನ್ನು ಕೊಲೆ ಮಾಡುವ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ’ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಹೊರವಲಯದ ಶಂಶಾಬಾದ್ ಟೋಲ್ ಘಟಕದ ಬಳಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯ ಪರಿಶೀಲಿಸಿ,ಪೊಲೀಸರು ಪ್ರಕರಣ ಭೇದಿಸಿದ್ದಾರೆ.ಕೃತ್ಯಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಮೊಹಮ್ಮದ್ ಆರೀಫ್ (26), ಕ್ಲೀನರ್ ಜೊಲ್ಲು ಶಿವ (20), ಸಹಾಯಕರಾದ ಜೊಲ್ಲು ನವೀನ್ (20) ಮತ್ತು ಚೆನ್ನಕೇಶವಲು (20) ಎಂಬುವವರನ್ನು ಬಂಧಿಸಿದ್ದಾರೆ.ಟೋಲ್ ಘಟಕದ ಬಳಿ ಇದ್ದ ಆರೋಪಿಗಳೇ, ಪಶುವೈದ್ಯೆಯ ಸ್ಕೂಟರ್ನ ಚಕ್ರವನ್ನು ಪಂಕ್ಚರ್ ಮಾಡಿದ್ದಾರೆ. ನೆರವು ನೀಡುವ ನೆಪವೊಡ್ಡಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಆರೋಪಿಗಳು ಹೈದರಾಬಾದ್ಗೆ ಇಟ್ಟಿಗೆ ಸರಬರಾಜು ಮಾಡಲು ಬಂದಿದ್ದರು. ಇಟ್ಟಿಗೆ ಳಿಸಿಕೊಳ್ಳಬೇಕಿದ್ದವರು ಸಂಪರ್ಕಕ್ಕೆ ಸಿಗದ ಕಾರಣ ಟೋಲ್ ಬಳಿಯೇ ಲಾರಿ ನಿಲ್ಲಿಸಿಕೊಂಡು ನಿಂತಿದ್ದರು. ಸಂಜೆ 6ರ ವೇಳೆಯಲ್ಲಿ ಲಾರಿಯಲ್ಲಿಯೇ ಮದ್ಯಪಾನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
‘ಬುಧವಾರ ಸಂಜೆ 6 ಗಂಟೆಗೆ ಪಶುವೈದ್ಯೆ ಟೋಲ್ ಬಳಿ ಬಂದಿದ್ದಾರೆ. ಅಲ್ಲಿ ತಮ್ಮ ಸ್ಕೂಟಿಯನ್ನು ನಿಲ್ಲಿಸಿ, ಕ್ಯಾಬ್ ಹತ್ತಿ ಹೋಗಿದ್ದಾರೆ.ಚರ್ಮರೋಗ ತಜ್ಞರೊಬ್ಬರನ್ನು ಭೇಟಿ ಮಾಡಿ, ಅವರು ರಾತ್ರಿ 9ರ ಹೊತ್ತಿಗೆ ವಾಪಸ್ ಬಂದಿದ್ದಾರೆ. ಆಗ ಅವರ ಸ್ಕೂಟಿಯ ಚಕ್ರ ಪಂಕ್ಚರ್ ಆಗಿರುವುದು ಗೊತ್ತಾಗಿದೆ. ಚಕ್ರದ ಪಂಕ್ಚರ್ ಸರಿಪಡಿಸಲು ನೆರವು ನೀಡುವುದಾಗಿ ಆರೋಪಿಗಳು ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.
‘ರಾತ್ರಿ 9.22ಕ್ಕೆ ಪಶುವೈದ್ಯೆ ತಮ್ಮ ತಂಗಿಗೆ ಕರೆ ಮಾಡಿದ್ದಾರೆ. ತಮ್ಮ ಸ್ಕೂಟರ್ ಪಂಕ್ಚರ್ ಆಗಿದೆ, ಲಾರಿ ಚಾಲಕರು ನೆರವು ನೀಡುವುದಾಗಿ ಹೇಳುತ್ತಿದ್ದಾರೆ. ಅದರೆ ತನಗೆ ಭಯವಾಗುತ್ತಿದೆ’ ಎಂದು ಹೇಳಿದ್ದಾರೆ. 9.30ರಲ್ಲಿ ಅವರ ತಂಗಿ ವಾಪಸ್ ಕರೆ ಮಾಡಿದ್ದಾರೆ. ಪಶುವೈದ್ಯೆಯ ಫೋನ್ ಸ್ವಿಚ್ಆಫ್ ಎಂದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆಕೆಯನ್ನು ಅತ್ಯಾಚಾರ ಮಾಡುವ ಉದ್ದೇಶದಿಂದಲೇ ಆಕೆಯ ಸ್ಕೂಟರ್ನ ಚಕ್ರದ ಗಾಳಿ ಬಿಟ್ಟಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೂರ್ವಸಂಚಿನಂತೆ ಜೊಲ್ಲು ನವೀನ್ ಸ್ಕೂಟರ್ ಅನ್ನು ಪಂಕ್ಚರ್ ಹಾಕಿಸಲು ತೆಗೆದುಕೊಂಡು ಹೋಗಿದ್ದಾನೆ. ಪಂಕ್ಚರ್ ಅಂಗಡಿ ತೆಗೆದಿಲ್ಲವೆಂದು ಕೆಲವೇ ನಿಮಿಷಗಳಲ್ಲಿ ವಾಪಸ್ ಆಗಿದ್ದಾನೆ. ನಂತರ ಬೇರೆಡೆ ಪಂಕ್ಚರ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ. ಆಗ ಆರೀಫ್, ಪಶುವೈದ್ಯೆಯನ್ನು ಎತ್ತಿಕೊಂಡು ಪಕ್ಕದಲ್ಲಿದ್ದ ಕಾಂಪೌಂಡ್ನತ್ತ ಎತ್ತೊಯ್ದಿದ್ದಾನೆ. ಅಲ್ಲಿ ಆರೀಫ್, ಶಿವ ಮತ್ತು ಚೆನ್ನಕೇಶವಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ವಾಪಸ್ ಬಂದ ನವೀನ್ ಸಹ ಅತ್ಯಾಚಾರ ಎಸಗಿದ್ದಾನೆ’ ಎಂದು ಪೊಲೀಸರು ವಿವರಿಸಿದ್ದಾರೆ.
‘ಆಕೆಯ ಬಾಯಿ ಮತ್ತು ಮೂಗನ್ನು ಮುಚ್ಚಿ ಆರೀಫ್ ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಲಾರಿಯಲ್ಲಿ ಶವ ಸಾಗಿಸಿದ್ದಾರೆ. ಸ್ಕೂಟಿಯಲ್ಲಿ ಹೋಗಿ ಬಾಟಲ್ ಒಂದಕ್ಕೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಟೋಲ್ ಘಟಕದಿಂದ 30 ಕಿ.ಮೀ. ದೂರದಲ್ಲಿದ್ದ ಸೇತುವೆ ಕೆಳಗೆ ಶವ ಇಟ್ಟು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.
ಹೇಳಿಕೆಗೆ ಆಕ್ರೋಶ: ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹ್ಮೂದ್ ಅಲಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಮೀಪದಲ್ಲೇ ಮತ್ತೊಂದು ಶವ
ಪಶುವೈದ್ಯೆಯ ಶವ ಪತ್ತೆಯಾದ ಜಾಗಕ್ಕೆ ಸಮೀಪದಲ್ಲೇ ಮತ್ತೊಬ್ಬ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಶವವೂ ಅರೆಬೆಂದ ಸ್ಥಿತಿಯಲ್ಲಿದೆ. ಆಕೆಯ ಗುರುತು ಪತ್ತೆಯಾಗಿಲ್ಲ.ಎರಡೂ ಹತ್ಯೆಗಳು ಒಂದೇ ರೀತಿಯಲ್ಲಿ ನಡೆದಿರುವ ಸಾಧ್ಯತೆ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಶುವೈದ್ಯೆ ಹತ್ಯೆ ಆರೋಪಿಗಳನ್ನೂ ಈ ಬಗ್ಗೆಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಅತ್ಯಾಚಾರ, ಕೊಲೆಯಿಂದ ಆಘಾತವಾಗಿದೆ. ಒಬ್ಬ ಮನುಷ್ಯ ಮತ್ತೊಬ್ಬರನ್ನು ಇಷ್ಟು ಭೀಕರವಾಗಿ ಕೊಲ್ಲುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ
ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ
ಪಶುವೈದ್ಯೆಯು ಅವರ ತಂಗಿಗೆ ಕರೆ ಮಾಡುವ ಬದಲು, ಪೊಲೀಸರಿಗೆ ಕರೆ ಮಾಡಿದ್ದಿದ್ದರೆ ಅವರು ಬದುಕಿರುತ್ತಿದ್ದರೇನೋ
-ಮೊಹಮ್ಮದ್ ಮಹ್ಮೂದ್ ಅಲಿ, ತೆಲಂಗಾಣ ಗೃಹ ಸಚಿವ
ನಿರ್ಭಯ ಅತ್ಯಾಚಾರ ಪ್ರಕರಣ ನಡೆದು 7 ವರ್ಷವಾಯಿತು. ಒಂದು ಸಮಾಜವಾಗಿ ನಾವು ಸೋಲುತ್ತಿದ್ದೇವೆ. ಅತ್ಯಂತ ಕಠಿಣವಾದ ಕಾನೂನುಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ
-ನಟ ಅಕ್ಷಯ್ ಕುಮಾರ್
ರಾಂಚಿ: ಸಾಮೂಹಿಕ ಅತ್ಯಾಚಾರ
ರಾಂಚಿ (ಪಿಟಿಐ): ಇಲ್ಲಿನ ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಮಂಗಳವಾರ ಸಂಜೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ರಾಂಚಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನವೆಂಬರ್ 26ರಂದು,25 ವರ್ಷದ ವಿದ್ಯಾರ್ಥಿನಿ ತನ್ನ ಗೆಳೆಯನ ಜತೆ ರಾಂಚಿ ಹೊರವಲಯದ ಸಂಗ್ರಾಮಪುರದ ಬಳಿ ಇದ್ದಾಗ ಕೃತ್ಯ ನಡೆದಿದೆ. ಬಂದೂಕು ಮತ್ತು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪು ವಿದ್ಯಾರ್ಥಿನಿಯ ಗೆಳೆಯನ ಮೇಲೆ ಹಲ್ಲೆ ನಡೆಸಿದೆ. ನಂತರ ಆಕೆಯನ್ನು ಹತ್ತಿರದಲ್ಲಿದ್ದ ಇಟ್ಟಿಗೆ ಗೂಡಿನ ಬಳಿ ಕರೆದೊಯ್ದು ಅತ್ಯಾಚಾರ ನಡೆಸಿದೆ. ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಅತ್ಯಾಚಾರ, ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯಿಂದಲೇ ಅತ್ಯಾಚಾರ
ಕೋಟಾ: ರಾಜಸ್ಥಾನದ ಬುಂಡಿಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆಯು ಶಾಲೆಯಿಂದ ಮನೆಗೆ ಹಿಂತಿರುಗುವಾಗ, ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಗೆ ಬಾಲ್ಯವಿವಾಹವಾಗಿದೆ. ಆದರೆ, 15 ವರ್ಷದ ಬಾಲಕಿ ಆಕೆಯ ತವರು ಮನೆಯಲ್ಲೇ ಇದ್ದಾಳೆ. ಈ ಕಾರಣದಿಂದ ಕುಪಿತನಾಗಿದ್ದ ಆಕೆಯ ಪತಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಕೋಲ್ಕತ್ತ (ಪಿಟಿಐ): ದಕ್ಷಿಣ ಕೋಲ್ಕತ್ತದ ಕಾಳಿಘಾಟ್ ದೇವಾಲಯದ ಬಳಿ ಇಬ್ಬರು ಬಾಲಕಿಯರ ಮೇಲೆ ಮೂವರು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಬಾಲಕಿಯರು ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದರು. ಆರೋಪಿಗಳು ಭಿಕ್ಷೆ ನೀಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಬಾಲಕಿಯರನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ: ನ್ಯಾಯಾಧೀಶೆಗೆ ಬೆದರಿಕೆ
ತಿರುವನಂತಪುರ: ತಮ್ಮ ಕಕ್ಷಿದಾರನಿಗೆ ಜಾಮೀನು ಮಂಜೂರು ಮಾಡಲಿಲ್ಲ ಎಂಬ ಕಾರಣಕ್ಕೆ,ಇಲ್ಲಿನ ಜಿಲ್ಲಾ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ದೀಪಾ ಮೋಹನ್ ಅವರಿಗೆ ವಕೀಲರ ಗುಂಪು ಬೆದರಿಕೆ ಹಾಕಿದೆ. ಈ ಸಂಬಂಧ 12 ವಕೀಲರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರಲ್ಲಿ ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ದೀಪಾ ಅವರು ರದ್ದುಪಡಿಸಿದ್ದರು. ಜಾಮೀನು ರದ್ದತಿ ಆದೇಶವನ್ನು ವಾಪಸ್ ಪಡೆಯುವಂತೆ ವಕೀಲರು ದೀಪಾ ಅವರ ಮೇಲೆ ಒತ್ತಡ ಹೇರಿದ್ದರು. ಆಗ ವಕೀಲರು ಗಲಾಟೆ ಮಾಡಿದ್ದಾರೆ.ನಂತರ ಆರೋಪಿಗಳು ದೀಪಾ ಅವರ ಕಚೇರಿಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ‘ನೀವು ಮಹಿಳೆ. ಹೀಗಾಗಿ ಸುಮ್ಮನೆ ಬಿಟ್ಟಿದ್ದೇವೆ. ಇಲ್ಲದಿದ್ದಲ್ಲಿ, ನಿಮ್ಮನ್ನು ಹೊರಗೆ ಎಳೆದು ಹೊಡೆಯುತ್ತಿದ್ದೆವು’ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕೇರಳ ಹೈಕೋರ್ಟ್ ರಿಜಿಸ್ಟ್ರಾರ್ಗೆ ನ್ಯಾಯಾಂಗ ನೌಕರರ ಸಂಘವು ದೂರು ನೀಡಿತ್ತು. ಹೈಕೋರ್ಟ್ ಸೂಚನೆ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಈ ಪ್ರಕರಣದಲ್ಲಿ ತಿರುವನಂತಪುರ ವಕೀಲರ ಸಂಘದ ಅಧ್ಯಕ್ಷ ಪ್ರಮುಖ ಆರೋಪಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.