ಕೋಲ್ಕತ್ತ: ಸಿಂಧೂರ ಮತ್ತು ಮಾಂಗಲ್ಯ ಧರಿಸಿ ಸಾಂಪ್ರದಾಯಿಕ ಧಿರಿಸಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನಸೆಳೆದಿದ್ದ ಸಂಸದೆ ನುಸ್ರತ್ ಜಹಾನ್ ಗುರುವಾರ ಕೋಲ್ಕತ್ತದಲ್ಲಿ ನಡೆದ ರಥಯಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಸಿಂಧೂರ ಮತ್ತು ಮಂಗಲಸೂತ್ರ ಧರಿಸಿರುವ ಅವರ ನಡೆಯನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಟೀಕಿಸಿದ್ದ ಬೆನ್ನಲ್ಲೇ ನುಸ್ರತ್ ಮತ್ತೊಮ್ಮೆ ಅಂತಹುದೇ ಉಡುಗೆ ಧರಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೆ ಮಿಂಟೋ ಪಾರ್ಕ್ನಲ್ಲಿ ನಡೆದ ಇಸ್ಕಾನ್ ರಥಯಾತ್ರೆ ಉದ್ಘಾಟನೆಯ ಸಮಾರಂಭದಲ್ಲಿ ಭಾಗವಹಿಸಿದರು. ಪತಿ ನಿಖಿಲ್ ಜೈನ್ ಜತೆ ನುಸ್ರುತ್ ಜಹಾನ್ ಆಗಮಿಸಿದ್ದರು. ಮಮತಾ ಬ್ಯಾನರ್ಜಿ ಜಗನ್ನಾಥ ದೇವರ ರಥಯಾತ್ರೆಗೆ ಚಾಲನೆ ನೀಡಿದರು. ‘ಜೈ ಜಗನ್ನಾಥ್’, ‘ಜೈ ಹಿಂದ್’ ಮತ್ತು ‘ಜೈ ಬಾಂಗ್ಲಾ’ ಎಂದು ಘೋಷಣೆಗಳನ್ನು ಹಾಕಿದರು.
‘ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆ ಹೊಂದುವುದೇ ನಿಜವಾದ ಧರ್ಮ’ ಎಂದು ಮಮತಾ ಬ್ಯಾನರ್ಜಿ ಹೇಳಿದರು. ‘ಎಲ್ಲ ಜಾತಿ, ಜನಾಂಗದವರು ಪಶ್ಚಿಮ ಬಂಗಾಳದ ಹಬ್ಬ, ಉತ್ಸವಗಳಲ್ಲಿ ಭೇದವಿಲ್ಲದೆಭಾಗವಹಿಸುತ್ತಾರೆ. ಪಶ್ಚಿಮ ಬಂಗಾಳವೆಂದರೆ ಸೌಹಾರ್ದತೆಯ ಪ್ರತೀಕ’ ಎಂದು ನುಸ್ರುತ್ ಜಹಾನ್ ಹೇಳಿದರು.
‘ದೀದಿ ಅವರು ಈದ್ ಸಂದರ್ಭದಲ್ಲಿಯೂ ಬಂದು ನಮ್ಮೊಡನೆ ಭಾಗವಹಿಸುತ್ತಾರೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಇದು ನಂಬಿಕೆಯ ವಿಚಾ ರವಷ್ಟೆ. ಆದ್ದರಿಂದ ರಾಜಕೀಯ ಮತ್ತು ಧರ್ಮವನ್ನ ಪ್ರತ್ಯೇಕವಾಗಿ ಇಡೋಣ’ ಎಂದು ಹೇಳಿದರು.ಅವರ ಪತಿ ನಿಖಿಲ್ ಜೈನ್, ಪತ್ನಿಯ ನಡೆಯ ಬಗ್ಗೆ ತಮಗೆ ಹೆಮ್ಮೆ ಇದೆ ಎಂದು ಹೇಳಿದರು.