ಗುಬ್ಬಿ: ‘ಲಿಂಗಾಯತ ಸಮುದಾಯದವರು ಯಾವಾಗಲೂ ನಮ್ಮ ಮನೆ ಹತ್ತಿರ ಅಲೆಯುತ್ತಿರಬೇಕು ಎಂಬ ಧೋರಣೆ ಇಟ್ಟುಕೊಂಡಿರುವ ಮಾಜಿ ಸಂಸದ ಜಿ.ಎಸ್.ಬಸವರಾಜು ತಮ್ಮದೇ ಸಮುದಾಯದ ಯಾವುದೇ ಮುಖಂಡರನ್ನು ಬೆಳೆಸುತ್ತಿಲ್ಲ’ ಎಂದು ಮುಖಂಡ ಜಿ.ಎಸ್.ರವಿಶಂಕರ್ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಜಿ.ಎಸ್.ಬಸವರಾಜು ಅವರು ನಮ್ಮ ತಂದೆ ಜಿ.ಎಸ್.ಶಿವನಂಜಪ್ಪ ಬಗ್ಗೆ ಅವ್ಯಾಚ್ಯ ಶಬ್ದಗಳಲ್ಲಿ ನಿಂದಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಧ್ವನಿ ಮುದ್ರಿಕೆ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಇವರು ಸಂಸದರಾಗುವ ಮೊದಲೇ ನಮ್ಮ ತಂದೆ ಬೆಳ್ಳಾವಿ ಕ್ಷೇತ್ರದಲ್ಲಿ ಶಾಸಕರಾಗಿದ್ದರು’ ಎಂದರು.
’ತಾಲ್ಲೂಕಿನಲ್ಲಿ ಲಿಂಗಾಯತ ಸಮುದಾಯವನ್ನು ಯಾವತ್ತೂ ಮುಂದುವರಿಯಲು ಇವರು ಬಿಟ್ಟಿಲ್ಲ. ಗುಬ್ಬಿ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಶಾಸಕ ಶ್ರೀನಿವಾಸ್ ಮೇಲೆ ಮೃದು ಧೋರಣೆ ತಾಳುತ್ತಾರೆ. ಲಿಂಗಾಯತ ಸಮುದಾಯದ ಎಸ್.ಡಿ.ದಿಲೀಪ್ ಕುಮಾರ್ ಚುನಾವಣೆಗೆ ಅಣಿಯಾಗುತ್ತಿರುವುದನ್ನು ಅರಿತು ಅಡ್ಡಿ ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ನೀಡದಿದ್ದರೂ ದಿಲೀಪ್ ಬಂಡಾಯವಾಗಿ ಸ್ಪರ್ಧಿಸಲಿದ್ದಾರೆ’ ಎಂದು ಹೇಳಿದರು.