ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮಸೇನೆ ಕಾರ್ಯಕರ್ತ ಪರಶುರಾಮ ಬಂಧನ

ಗೌರಿ ಲಂಕೇಶ್‌ ಹತ್ಯೆ
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶ್ರೀರಾಮಸೇನೆ ಕಾರ್ಯಕರ್ತ ಪರಶುರಾಮ ಅಶೋಕ ವಾಘ್ಮೋರೆ (26) ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ನಿವಾಸಿಯಾಗಿರುವ ಆರೋಪಿ, ಸೈಬರ್‌ ಕೆಫೆ ಇಟ್ಟುಕೊಂಡಿದ್ದಾನೆ. ಈತ, 2011ರಲ್ಲಿ ಸಿಂದಗಿ ತಹಸೀಲ್ದಾರ್‌ ಕಚೇರಿ ಎದುರು ಪಾಕ್‌ ಧ್ವಜ ಹಾರಿಸಿದ್ದ ಪ್ರಕರಣದಲ್ಲೂ ಆರೋಪಿ. ಈತನನ್ನು ಎಸ್‌ಐಟಿ ಅಧಿಕಾರಿಗಳು 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮಂಗಳವಾರ ಹಾಜರು ಪಡಿಸಿದರು. ಜೂನ್ 24ರವರೆಗೆ ಆತನನ್ನು ಎಸ್‌ಐಟಿ ಕಸ್ಟಡಿಗೆ ನೀಡಿತು.

ಈ ಪ್ರಕರಣದಲ್ಲಿ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಎಂಬಾತನನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ಪರಶುರಾಮ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪಾಕ್‌ ಧ್ಜಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ಜಾಮೀನು ಪಡೆದು ಹೊರಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಸ್ಥಳೀಯವಾಗಿ ಕೋಮು ಗಲಭೆ ಸೃಷ್ಟಿಸಿ, ತಾನೇ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ. ಪಿಸ್ತೂಲ್ ಬಳಸುವುದರಲ್ಲಿ ಆತ ಪರಿಣಿತ ಎಂದು ಆರೋಪಿಗಳು ಹೇಳಿಕೊಂಡಿದ್ದರು. ತಮಗೂ ಆತನೇ ತರಬೇತಿ ನೀಡಿದ್ದ’ ಎಂದು ಆರೋಪಿಗಳು ತಿಳಿಸಿದ್ದಾಗಿ ಅಧಿಕಾರಿ ವಿವರಿಸಿದರು.

‘ಕಲಬುರ್ಗಿ ಜಿಲ್ಲೆಯ ಸೊನ್ನ ಹಾಗೂ ವಿಜಯಪುರ ಜಿಲ್ಲೆಯ ದೇವನಗಾಂವ್‌ ಗಡಿಯಲ್ಲಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಈ ಪ್ರದೇಶವು ಸಿಂದಗಿಗೆ ಸಮೀಪದಲ್ಲಿದೆ. ಅಲ್ಲಿಂದಲೂ ಆರೋಪಿ ಪಿಸ್ತೂಲ್‌ಗಳನ್ನು ಖರೀದಿಸಿದ್ದ ಮಾಹಿತಿ ಇದೆ’ ಎಂದು ಹೇಳಿದರು.

ಇನ್ನೊಬ್ಬ ವಶಕ್ಕೆ; ಪ್ರಕರಣ ಸಂಬಂಧ ಸಿಂದಗಿಯ ಸುನೀಲ್ ಮಡಿವಾಳಪ್ಪ ಅಗಸರ (25) ಎಂಬಾತನನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.

‘ಸುನೀಲ್‌ ಸಹ ಶ್ರೀರಾಮಸೇನೆ ಕಾರ್ಯಕರ್ತ. ಪರಶುರಾಮನ ಸ್ನೇಹಿತ. ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.

ತನಿಖೆ ಚುರುಕು: ಪ್ರಕರಣ ಸಂಬಂಧ ಮೊದಲಿಗೆ ಬಂಧಿಸಲಾಗಿದ್ದ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಳಿದ ಐವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ತನಿಖೆಯ ಇದುವರೆಗಿನ ಪ್ರಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ.  ಅದಕ್ಕೆ ಅಗತ್ಯವಿರುವ ಪುರಾವೆಗಳನ್ನು ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಗನ್‌ ಕೇಳಿದ್ದ ಪ್ರವೀಣ್; ನವೀನ್ ಕೊಟ್ಟಿರಲಿಲ್ಲ’

‘ಬೀರೂರಿನಲ್ಲಿ ಭೇಟಿಯಾಗಿದ್ದ ಪ್ರವೀಣ್, ಸುಮ್ಮನೇ ಮಾತನಾಡುತ್ತಿರುವಾಗ ಗನ್‌ ಬೇಕೆಂದು ಕೇಳಿದ್ದ. ಆದರೆ, ನಾನು ಆತನಿಗೆ ಇದುವರೆಗೂ ಗನ್ ಕೊಟ್ಟಿಲ್ಲ’.

ಇದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ಕುಮಾರ್‌, ಗುಜರಾತ್‌ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಗೆ ನೀಡಿದ ಹೇಳಿಕೆ. ಆರೋಪಿಯ ವಿಚಾರಣೆ ನಡೆಸಿದ್ದ ಪ್ರಯೋಗಾಲಯದ ಅಧಿಕಾರಿಗಳು, ಹಲವು ಪ್ರಶ್ನೆಗಳಿಗೆ ಆತನಿಂದ ಉತ್ತರ ಪಡೆದುಕೊಂಡಿದ್ದಾರೆ. ಆ ಬಗ್ಗೆ ವೈಜ್ಞಾನಿಕ ಅಧಿಕಾರಿ ಎಸ್‌.ಆರ್‌.ಶಾ, ಎಸ್‌ಐಟಿ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರಿಗೆ ಇತ್ತೀಚೆಗಷ್ಟೇ ಎರಡು ಪುಟಗಳ ಪತ್ರ ಬರೆದಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ.

‘ಹತ್ಯೆ ಆರೋಪಿ ಕೆ.ಟಿ.ನವೀನ್‌ಕುಮಾರ್‌, ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದ. ಹೀಗಾಗಿ, ಆ ಪರೀಕ್ಷೆ ನಡೆಸಲು ಆಗಿಲ್ಲ. ಸಂದರ್ಶನವನ್ನಷ್ಟೇ ನಡೆಸಿದೆವು. ಅದರಲ್ಲಿ ಆತ, ಕನ್ನಡದಲ್ಲಿ ಉತ್ತರಗಳನ್ನು ನೀಡಿದ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿ ಈ ಪತ್ರ ಬರೆಯುತ್ತಿದ್ದೇವೆ’ ಎಂದು ಶಾ ಹೇಳಿದ್ದಾರೆ.

‘ಗೌರಿ, ಪತ್ರಕರ್ತೆಯೆಂದು ಆರೋಪಿಗೆ ಗೊತ್ತಿದೆ. ಕುತೂಹಲಕ್ಕಾಗಿ ಅವರ ಬರಹಗಳನ್ನು ಆತ ಓದಿದ್ದಾನೆ. ಅವರ ಹತ್ಯೆ ಬಳಿಕವೇ ಈ ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಾರಂಭಿಸಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದ ವೇಳೆ ಗೌರಿ ಮನೆಗೂ ಕರೆದೊಯ್ಯಲಾಗಿತ್ತು. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರಿಂದ ಮನೆಯ ಬಗ್ಗೆ ಆರೋಪಿ ಏನನ್ನು ಹೇಳಿರಲಿಲ್ಲ’.

‘ಪೊಲೀಸರು ತಮ್ಮಿಷ್ಟದಂತೆ ತನಿಖೆ ಮಾಡುತ್ತಿದ್ದಾರೆ. ನನಗೆ ಮಾನಸಿಕ ಕಿರುಕುಳವನ್ನೂ ನೀಡುತ್ತಿದ್ದಾರೆ ಎಂದು ಆರೋಪಿ ಪದೇ ಪದೇ ಹೇಳುತ್ತಿದ್ದ. ನಾನು ಸಾಯುವ ಮುನ್ನ ಒಮ್ಮೆ ಕರ್ನಾಟಕವನ್ನು ಪೂರ್ತಿಯಾಗಿ ನೋಡಬೇಕು’ ಎಂಬ ಆಸೆ ವ್ಯಕ್ತಪಡಿಸಿದ.

‘ಗೌರಿ ಲಂಕೇಶ್ ಹತ್ಯೆ ಬಗ್ಗೆ ಆತ ಯಾರೊಬ್ಬರ ಎದುರು ಅಭಿಪ್ರಾಯ ಹಂಚಿಕೊಂಡಿಲ್ಲ. ಖುಷಿ ಹಾಗೂ ದುಃಖ ಎರಡೂ ಆತನಿಗಿಲ್ಲ. ಆದರೆ, ಹತ್ಯೆ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಆತ ಹೆಚ್ಚು  ಯೋಚಿಸುತ್ತಿದ್ದಾನೆ’ ಎಂದು ಶಾ ಹೇಳಿದ್ದಾರೆ.

‘ಪ್ರೊ. ಕೆ.ಎಸ್. ಭಗವಾನ್ ಯಾರು ಎಂದೂ ಆತನಿಗೆ ಗೊತ್ತಿದೆ. ಅವರು ಸಾಹಿತಿ, ಮೈಸೂರಿನವರು ಎಂದಷ್ಟೇ ಹೇಳುತ್ತಾನೆ. ಆದರೆ, ಅವರ ಯಾವುದೇ ಪುಸ್ತಕವನ್ನು ಆರೋಪಿ ಓದಿಲ್ಲ. ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿಲ್ಲ. ಸಮಯ ವ್ಯರ್ಥ ಮಾಡಲು ಆತ ಇಷ್ಟಪಡುವುದಿಲ್ಲ. ಆತ ಕಡು ಹಿಂದೂತ್ವವಾದಿ ಅಲ್ಲ. ಸ್ವಲ್ಪ ಓದಿದ್ದಾನ್ನಷ್ಟೇ’ ಎಂದಿದ್ದಾರೆ.

‘ನವೀನ್‌ಗೆ ಪ್ರವೀಣ್ ಯಾರು ಎಂಬುದು ಗೊತ್ತಿದೆ. ಕಾರ್ಯಕ್ರಮವೊಂದಕ್ಕೆ ಹೋದಾಗ ಪ್ರವೀಣ್ ಬಗ್ಗೆ ಸ್ನೇಹಿತನೊಬ್ಬ ಆತನಿಗೆ ತಿಳಿಸಿದ್ದ. 2017ರಲ್ಲಿ ಮಂಡ್ಯದ ಸಂಭಾಜಿ ಸೇತುವೆ ಬಳಿ ಮೊದಲ ಬಾರಿಗೆ ಆರೋಪಿ, ಪ್ರವೀಣ್‌ನನ್ನು ಭೇಟಿ ಆಗಿದ್ದ. ಆನಂತರ, ಆತನನ್ನು ಬೀರೂರಿನ ತನ್ನ ಮನೆಗೂ ಕರೆಸಿದ್ದ’ ಎಂದು ಶಾ ಹೇಳಿದ್ದಾರೆ.

* ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪರಶುರಾಮನ ಪಾತ್ರವೇನು ಎಂಬುದನ್ನು ವಿಚಾರಣೆಯಿಂದ ತಿಳಿದುಕೊಳ್ಳಲಿದ್ದೇವೆ. ನಂತರ, ನ್ಯಾಯಾಲಯಕ್ಕೆ ವರದಿ ನೀಡಲಿದ್ದೇವೆ 

– ಎನ್‌. ಅನುಚೇತ್, ಡಿಸಿಪಿ, ಎಸ್ಐಟಿ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT