ನವದೆಹಲಿ:ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿರುವ 54 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಬೆಳಿಗ್ಗೆ 10.30ಕ್ಕೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಆರ್.ಎಫ್.ನರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರ ಪೀಠವುಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ದೇಗುಲ ಪ್ರವೇಶಿಸಿದ್ದ ಬಿಂದು ಮತ್ತು ಕನಕದುರ್ಗಾ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನೂ ಬುಧವಾರ ನಡೆಸುವಂತೆ ಅರ್ಜಿದಾರರು ಕೋರಿದ್ದರು. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿಸಿಲ್ಲ. ಅರ್ಜಿದಾರರ ವಕೀಲ ಪಿ.ವಿ. ದಿನೇಶ್ ಅವರು ವಿಚಾರಣೆ ಸಂದರ್ಭದಲ್ಲಿ ಹಾಜರಿರಬಹುದು ಎಂದು ಹೇಳಿದೆ. ತಮ್ಮ ಪ್ರವೇಶದ ನಂತರ ದೇವಾಲಯವನ್ನು ತಂತ್ರಿ ಶುದ್ಧೀಕರಿಸಿದ್ದರ ವಿರುದ್ಧ ಈ ಇಬ್ಬರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
ಕನಕದುರ್ಗಾಗೆ ಗಂಡನ ಮನೆಯಲ್ಲಿ ವಾಸಕ್ಕೆ ಅವಕಾಶ
ಶಬರಿಮಲೆ ದೇಗುಲ ಪ್ರವೇಶಿಸಿದ ಮಹಿಳೆ ಕನಕದುರ್ಗಾ ಅವರಿಗೆ ಅವರ ಗಂಡನ ಮನೆಯಲ್ಲಿ ವಾಸಿಸಲು ಅವಕಾಶ ಕೊಡಬೇಕು ಎಂದುಮಲಪ್ಪುರದ ಗ್ರಾಮ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.
ಕೌಟುಂಬಿಕ ಹಿಂಸೆ ಕಾಯ್ದೆ ಅಡಿಯಲ್ಲಿ ಕನಕದುರ್ಗಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಗ್ರಾಮ ನ್ಯಾಯಾಲಯದ ನ್ಯಾಯಾಧಿಕಾರಿ ಕೆ.ಕೆ.ನಿಮ್ಮಿ ನಡೆಸಿದರು. ಇವರಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಷ್ಟೇ ಅಧಿಕಾರ ಇದೆ.
ಜನವರಿ 2ರಂದು ಶಬರಿಮಲೆ ದೇಗುಲ ಪ್ರವೇಶಿಸಿದ್ದನ್ನು ಅವರ ಗಂಡ ಮತ್ತು ಕುಟುಂಬದ ಇತರ ಸದಸ್ಯರು ವಿರೋಧಿಸಿದ್ದರು. ತಮ್ಮ ಮೇಲೆ ಅತ್ತೆ ಅಲ್ಲೆ ನಡೆಸಿದ್ದಾರೆ ಎಂದು ಕನಕದುರ್ಗಾ ಅವರು ದೂರು ಕೂಡ ನೀಡಿದ್ದರು.