ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದೋಷಮುಕ್ತ: ಆದೇಶ ಪರಿಶೀಲನೆಗೆ ‘ಸುಪ್ರೀಂ’ ನಿರ್ಧಾರ

Last Updated 6 ಮೇ 2019, 20:20 IST
ಅಕ್ಷರ ಗಾತ್ರ

ನವದೆಹಲಿ:ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೋಷಮುಕ್ತಗೊಳಿಸಿ ಚುನಾವಣಾ ಆಯೋಗವು ನೀಡಿದ ಆದೇಶಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

‌ಆಯೋಗವು ನೀಡಿದ ಆದೇಶದ ಪ್ರತಿಗಳನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ದೂರುದಾರರಿಗೆ ಸೂಚನೆ ನೀಡಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ನಿರ್ವಹಿಸಲು ಮಾರ್ಗದರ್ಶಿಸೂತ್ರಗಳನ್ನು ಸಿದ್ಧಪಡಿಸಬೇಕು ಎಂದು ದೂರುದಾರರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಕಾಂಗ್ರೆಸ್‌ ಸಂಸದೆ ಸುಶ್ಮಿತಾ ದೇವ್‌ ಅವರು ಮೋದಿ ಮತ್ತು ಶಾ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು.

‘ಈ ನ್ಯಾಯಾಲಯವು ಇದೇ 2ರಂದು ನೀಡಿದ ನಿರ್ದೇಶನದಂತೆ ಆಯೋಗವು ಆದೇಶ ನೀಡಿದೆ. ಹಾಗಾಗಿ ಈ ಆದೇಶಗಳನ್ನು ಪರಿಶೀಲಿಸಬೇಕಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಹೆಚ್ಚಿನ ದೂರುಗಳ ಬಗ್ಗೆ ಆಯೋಗವು ಅತಾರ್ಕಿಕವಾದ ಆದೇಶಗಳನ್ನು ನೀಡಿದೆ. ಆಯೋಗದ ಆದೇಶದ ಬಗ್ಗೆ ಒಬ್ಬ ಆಯುಕ್ತರು ಭಿನ್ನಮತ ಹೊಂದಿದ್ದರು. ಆಯೋಗವು ಆರೇಳು ಆದೇಶಗಳನ್ನು ನೀಡಿದೆ. ಆದರೆ ಯಾವ ಆದೇಶದಲ್ಲಿಯೂ ಕಾರಣಗಳನ್ನು ಉಲ್ಲೇಖಿಸಿಲ್ಲ. ಹೆಚ್ಚಿನ ಆದೇಶಗಳ ಬಗ್ಗೆ ಭಿನ್ನಮತವೂ ಇತ್ತು. ಬೇರೆ ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧದ ಇಂತಹುದೇ ದೂರುಗಳ ವಿಚಾರದಲ್ಲಿ ಆಯೋಗವು ಕ್ರಮ ಕೈಗೊಂಡಿದೆ ಎಂದುಸಿಂಘ್ವಿ ಅವರು ವಾದಿಸಿದರು.

ನೀತಿ ಸಂಹಿತೆ ಉಲ್ಲಂಘನೆ ವಿಚಾರಗಳ ಬಗ್ಗೆ ಚುನಾವಣೆ ನಂತರ ಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ. ಇದು ಮೂಲಭೂತ ವಿಷಯಕ್ಕೆ ಸಂಬಂಧಿಸಿದ ಕಾರಣ ಮಾರ್ಗದರ್ಶಿಸೂತ್ರಗಳನ್ನು ರೂಪಿಸಬೇಕು. ಎಲ್ಲ ಪ್ರಕರಣಗಳಲ್ಲಿಯೂ ಭಿನ್ನಮತವನ್ನು ಬಹಿರಂಗಪಡಿಸಲು ಅವಕಾಶ ಇರಬೇಕು ಎಂದು ಅವರು ಕೋರಿದರು.

ಮೋದಿ ಮತ್ತು ಶಾ ಅವರ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ಇದೇ 6ರೊಳಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌, ಆಯೋಗಕ್ಕೆ ಕಳೆದ ಗುರುವಾರ ಸೂಚನೆ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT