ಮಂಗಳೂರು: ಐದು ವರ್ಷಗಳಿಂದ ಕೋಮುವಾದಿಗಳನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ರಮಾನಾಥ ರೈ ಹಾಗೂ ಕಾಂಗ್ರೆಸ್ಸಿಗರು, ಕೋಟಿ ಕೊಟ್ಟು ಎಸ್ಡಿಪಿಐ ಜತೆ ವರದಕ್ಷಿಣೆ ನೀಡಿ ನಿಖಾ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪಿಸಿದರು.
ಹಿಂದೂಗಳ ಕೊಲೆ ಮಾಡಿದವರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಸ್ ಡಿಪಿಐ, ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆದಾಗಲೇ ಅವರ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.
ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದಾಗಬಾರದು ಎಂಬುದು ಬ್ರಿಟಿಷರ ನೀತಿಯಾಗಿತ್ತು. ಕಾಂಗ್ರೆಸ್ಸಿಗರು ಇಂದಿಗೂ ಅದನ್ನು ಮುಂದುವರಿಸಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ನೆಲೆಸಬೇಕಾದರೆ, ಮುಸ್ಲಿಮರು ಕಾಂಗ್ರೆಸ್ ಕಪಿಮುಷ್ಟಿಯಿಂದ ಹೊರಬರಬೇಕು ಎಂದು ಹೇಳಿದರು.
ನುಡಿದಂತೆ ನಡೆದಿದ್ದೇ ಆದರೆ, ಮರಳು, ಮರ, ವರ್ಗಾವಣೆ ದಂಧೆಯ ಹಣವನ್ನು ಹಂಚುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ರಾಹುಲ್ ಹೋದಲ್ಲಿ ಕಾಂಗ್ರೆಸ್ ಸೋಲುವುದು ನಿಶ್ಚಿತ. ಈಗ ಬಂಟ್ವಾಳಕ್ಕೆ ರಾಹುಲ್ ಬಂದಿದ್ದು, ರಮಾನಾಥ ರೈಗಳ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.