ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸಚಿವ ಸಂಪುಟವನ್ನುಸೋಮವಾರ ವಿಸ್ತರಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಎನ್ಸಿಪಿ ನಾಯಕ ಅಜಿತ್ ಪವಾರ್,ಸಂಪುಟ ದರ್ಜೆ ಸಚಿವರಾಗಿ 26 ಶಾಸಕರು ಹಾಗೂ ಸಹಾಯಕ ಸಚಿವರಾಗಿ 10 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಆಘಾಡಿ (ಎಂವಿಎ), ರಾಜ್ಯದಲ್ಲಿ ಅಧಿಕಾರ ವಹಿಸಿ ತಿಂಗಳು ಉರುಳಿದ ಬಳಿಕ ಸಂಪುಟ ವಿಸ್ತರಣೆಯಾಗಿದೆ.ವಿಧಾನ್ ಭವನ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಸಂಪುಟದಲ್ಲಿ ಎನ್ಸಿಪಿ ಮೇಲುಗೈ:ನವೆಂಬರ್ 28ರಂದು ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮೂರೂ ಪಕ್ಷಗಳ ತಲಾ ಇಬ್ಬರು ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ36 ಸಚಿವರ ಪೈಕಿ ಎನ್ಸಿಪಿಯ 10 ಮಂದಿಗೆ ಸಂಪುಟ ದರ್ಜೆ, ನಾಲ್ವರಿಗೆ ಸಹಾಯಕ ಸಚಿವ ಸ್ಥಾನ, ಶಿವಸೇನಾದ ಎಂಟು ಮಂದಿಗೆ ಸಂಪುಟ ದರ್ಜೆ ನಾಲ್ವರಿಗೆ ಸಹಾಯಕ ಸಚಿವ ಸ್ಥಾನ ಹಾಗೂ ಕಾಂಗ್ರೆಸ್ನ ಎಂಟು ಮಂದಿಗೆ ಸಂಪುಟ ದರ್ಜೆ ಹಾಗೂ ಇಬ್ಬರಿಗೆ ಸಹಾಯಕ ಸಚಿವ ಸ್ಥಾನ ನೀಡಲಾಗಿದೆ. ಸಂಪುಟದಲ್ಲಿ ಎನ್ಸಿಪಿಯ ಒಟ್ಟು 12 ಸಚಿವರಿದ್ದಾರೆ.
ಮಾಜಿ ಸಿಎಂ ಈಗ ಸಚಿವ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಕ್ರಾಂತಿಕಾರಿ ಶೇತ್ಕರಿ ಪಕ್ಷದ ಶಂಕರ್ರಾವ್ ಗಡಖ್ ಅವರಿಗೆ ಸಂಪುಟ ದರ್ಜೆ ಹಾಗೂ ಪ್ರಹಾರ್ ಜನ್ಶಕ್ತಿ ಪಕ್ಷದ ಬಚ್ಚು ಕಾಡು,ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ರಾಜೇಂದ್ರ ಪಾಟಿಲ್ ಯದ್ರಾವ್ಕರ್ಗೆ ಸಹಾಯಕ ಸಚಿವ ಸ್ಥಾನ ನೀಡಲಾಗಿದೆ.
ಶಾಸಕರ ವಿರುದ್ಧ ರಾಜ್ಯಪಾಲರು ಗರಂ!
ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಲಿಖಿತವಾಗಿ ನೀಡಿದ್ದ ಪ್ರಮಾಣ ವಚನ ಓದುವುದನ್ನು ಬಿಟ್ಟು, ವಿಷಯಾಂತರ ಮಾಡಿದ್ದಕ್ಕೆರಾಜ್ಯಪಾಲಭಗತ್ ಸಿಂಗ್ ಕೋಶಿಯಾರಿ ಆಕ್ಷೇಪ ವ್ಯಕ್ತಪಡಿಸಿದರು.
20 ಪಾಲಿಕೆ ಸದಸ್ಯರ ರಾಜೀನಾಮೆ
ಪುಣೆ (ಪಿಟಿಐ): ಪುಣೆ ಜಿಲ್ಲೆಯ ಭೋರ್ನ ಕಾಂಗ್ರೆಸ್ ಶಾಸಕ ಸಂಗ್ರಾಮ್ ತೋಪ್ಟೆ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಸಂಗ್ರಾಮ್ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ನ 20 ಪಾಲಿಕೆ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಭೋರ್ನ ಪಕ್ಷದ ನಾಯಕರೊಬ್ಬರು ತಿಳಿಸಿದರು.
ವರ್ಷಾ ಗಾಯಕ್ವಾಡ್ ಅವರು ಪ್ರಮಾಣ ವಚನ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸಿದರು. ಕೆ.ಸಿ. ಪಡ್ವಿ ಅವರು ಮತದಾರರಿಗೆ ಕೃತಜ್ಞತೆ ಹೇಳಲು ಮುಂದಾದರು. ಆದರೆ, ಈ ಇಬ್ಬರನ್ನೂ ರಾಜ್ಯಪಾಲರು ತಡೆದರು.
ಸಚಿವರಾದ ಪ್ರಮುಖರು
* ಎನ್ಸಿಪಿಯ ಹಿರಿಯ ನಾಯಕರಾದ ನವಾಬ್ ಮಲಿಕ್ ಹಾಗೂ ಅನಿಲ್ ದೇಶಮುಖ್
* ಮಾಜಿ ಸಭಾಧ್ಯಕ್ಷ ದಿಲೀಪ್ ವಾಲ್ಸೆ ಪಾಟಿಲ್
* ವಿಧಾನ ಪರಿಷತ್ನ ಮಾಜಿ ವಿಪಕ್ಷ ನಾಯಕ ಧನಂಜಯ ಮುಂಡೆ
* ವಿಧಾನಸಭೆಯ ಮಾಜಿ ವಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್
*
ಮೂರೂ ಪಕ್ಷಗಳ ನಡುವೆ ವಿಶ್ವಾಸದ ಕೊರತೆ ಇಲ್ಲ. ಜೊತೆಯಾಗಿ ಎಲ್ಲರೂ ಜನರಿಗಾಗಿ ಕಾರ್ಯನಿರ್ವಹಿಸುತ್ತೇವೆ. ‘ಸತ್ಯಮೇವ ಜಯತೆ’ ಎನ್ನುವುದನ್ನು ನಾವು ಅನುಸರಿಸುತ್ತೇವೆ.
–ಆದಿತ್ಯ ಠಾಕ್ರೆ, ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.