ವಯನಾಡ್: ವಯನಾಡ್ನ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದಾರೆ. ವಯನಾಡ್–ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧದ ವಿಚಾರವನ್ನೂ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಅಮೇಠಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಅಮೇಠಿಯನ್ನೇ ಉಳಿಸಿಕೊಳ್ಳಬಹುದು ಎಂಬ ಕಳವಳವನ್ನು ಹೋಗಲಾಡಿಸಲೂ ರಾಹುಲ್ ಯತ್ನಸಿದರು. ‘ನಾನು ಒಬ್ಬ ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಸಹೋದರ, ಮಗ ಅಥವಾ ಗೆಳೆಯನಾಗಿ ಬಂದಿದ್ದೇನೆ. ಜೀವನದ ಉದ್ದಕ್ಕೂ ಉಳಿಯುವ ಸಂಬಂಧ ಹೊಂದಲು ಬಯಸಿದ್ದೇನೆ’ ಎಂದು ಸುಲ್ತಾನ್ ಬತ್ತೇರಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದರು.
ವಿವಿಧ ಸಂಸ್ಕೃತಿ ಮತ್ತು ಸಿದ್ಧಾಂತಗಳ ಜನರು ಶಾಂತಿ ಮತ್ತು ಸೌಹಾರ್ದದಿಂದ ನೆಲೆಸಿರುವ ಸ್ಥಳ ವಯನಾಡ್ ಎಂದು ಅವರು ಹೇಳಿದರು. ವಯನಾಡ್ ಅನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಈ ಮೂಲಕ ಪರೋಕ್ಷ ತಿರುಗೇಟು ನೀಡಿದರು. ‘ನಿಮ್ಮ ಮುಂದೆ ನಿಲ್ಲುವುದು ನನಗೆ ದೊಡ್ಡ ಗೌರವ. ವಯನಾಡ್ ಮತ್ತು ಕೇರಳ ಎಂಬ ಪ್ರದೇಶಗಳಿವೆ. ಅದು ಶಾಂತಿ
ಯುತ ಸಹಬಾಳ್ವೆಗೆ ನಿದರ್ಶನ ಎಂಬ ಸಂದೇಶವನ್ನು ಭಾರತದ ಉದ್ದಗಲಕ್ಕೂ ನೀಡುವುದು ನನ್ನ ಬಯಕೆ’ ಎಂದರು.
ವಯನಾಡಿನ ದೀರ್ಘಕಾಲದ ಬೇಡಿಕೆಗಳನ್ನು ಪರಿಸರಕ್ಕೆ ಹಾನಿ ಮಾಡದೆಯೇ ಪರಿಹರಿಸಲು ಸಾಧ್ಯವಿದೆ. ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧದಿಂದ ಇಲ್ಲಿನ ಜನರಿಗೆ ಆಗುತ್ತಿರುವ ಕಷ್ಟದ ಅರಿವು ಇದೆ ಎಂದೂ ಅವರು ಹೇಳಿದರು.
ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ಇಲ್ಲಿ ಚುನಾವಣಾ ವಿಷಯವಾಗಿದೆ. ನಿಷೇಧ ತೆರವು ಮಾಡ
ಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. ಆದರೆ, ವನ್ಯ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಾತ್ರಿ ಸಂಚಾರಕ್ಕೆ ಅವಕಾಶ ಕೊಡುವುದನ್ನು ಪರಿಸರವಾದಿಗಳು ವಿರೋಧಿಸುತ್ತಿದ್ದಾರೆ. ಎತ್ತರಿತ ರಸ್ತೆ ನಿರ್ಮಾಣದ ಪ್ರಸ್ತಾವಕ್ಕೂ ವಿರೋಧ ವ್ಯಕ್ತವಾಗಿದೆ.
ತಿರುನೆಲ್ಲಿ ಮಹಾವಿಷ್ಣು ದೇವಾಲಯದಲ್ಲಿ ಅವರು ತಮ್ಮ ಪೂರ್ವಜರು ಮತ್ತು ಇತರ ಎಲ್ಲ ಹುತಾತ್ಮರಿಗೆ ‘ಬಲಿತರ್ಪಣ’ ಅರ್ಪಿಸಿದರು. ರಾಹುಲ್ ಅವರ ತಂದೆ ರಾಜೀವ್ ಗಾಂಧಿ ಅವರ ಚಿತಾಭಸ್ಮವನ್ನು ತಿರುನೆಲ್ಲಿಯಲ್ಲಿ ಹರಿಯುವ ಪಾಪ
ನಾಶಿನಿ ನದಿಯಲ್ಲಿ ವಿಸರ್ಜಿಸಲಾಗಿತ್ತು.
***
ಇಲ್ಲಿ ಮಾನವ–ವನ್ಯಜೀವಿ ಸಂಘರ್ಷವಿದೆ, ಪರಿಸರ–ಅಭಿವೃದ್ಧಿಯ ನಡುವೆ ಸಂಘರ್ಷವಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ
-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.