ರಾಂಚಿ: ಹತ್ಯೆ ಆರೋಪದಲ್ಲಿ ಶಿಕ್ಷೆಗೊಳಗಾಗಿರುವ ವ್ಯಕ್ತಿಗಳಿಗೆ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಸನ್ಮಾನ ಮಾಡಿರುವ ವಿಡಿಯೊ ಬಹಿರಂಗವಾಗಿದೆ. ಸಚಿವರ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗೋಮಾಂಸ ಸಾಗಿಸಿದ್ದಾರೆ ಎಂಬ ಅನುಮಾನದಲ್ಲಿ ಕಳೆದ ವರ್ಷ ಜೂನ್ 29ರಂದು ಜಾರ್ಖಂಡ್ನ ರಾಮಗಡದಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬ ವ್ಯಾಪಾರಿಯನ್ನು ಗುಂಪೊಂದು ಹತ್ಯೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದ 11 ಆರೋಪಿಗಳ ಪೈಕಿ 8 ಮಂದಿಯನ್ನು ದೋಷಿಗಳು ಎಂದು ಪರಿಗಣಿಸಿದ್ದ ರಾಮಗಡ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅವರು ಜಾರ್ಖಂಡ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿತ್ತು.
ಕೊಲೆ ಪ್ರಕರಣದ ಅಪರಾಧಿಗಳಿಗೆ ಸಚಿವರು ಸನ್ಮಾನ ಮಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಎನ್ಡಿಟಿವಿ ಪ್ರಸಾರ ಮಾಡಿದೆ.
ಟೈಮ್ಸ್ನೌ ಸುದ್ದಿವಾಹಿನಿ ಸಹ ವಿಡಿಯೊ ಪ್ರಸಾರ ಮಾಡಿದ್ದು, ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ.