ನವದೆಹಲಿ: ‘₹9000 ಕೋಟಿ ಬಾಕಿ ಇತ್ಯರ್ಥ ಕುರಿತು ತಮ್ಮ ಭರವಸೆಗೆ ಸಂಬಂಧಿಸಿದ ವಿಚಾರಣೆ ಬಾಕಿಯಲ್ಲಿದೆ ಎಂಬುದನ್ನೇ, ಲಂಡನ್ ಕೋರ್ಟ್ನಲ್ಲಿ ವಿಚಾರಣೆ ತಪ್ಪಿಸಿಕೊಳ್ಳಲು ಉದ್ಯಮಿ ವಿಜಯ್ ಮಲ್ಯ ನೆಪವಾಗಿ ಬಳಸಬಾರದು’ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಎಸ್ಬಿಐ ಮಲ್ಯ ವಿರುದ್ಧ ಲಂಡನ್ನಲ್ಲಿ ಹೂಡಿರುವ ಪ್ರಕರಣದ ವಿಚಾರಣೆಯನ್ನು, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇದೆ ಎಂಬ ನೆಪವೊಡ್ಡಿ ಮಲ್ಯ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದಾಗ ಕೋರ್ಟ್ ಸ್ಪಷ್ಟನೆ ನೀಡಿತು.
‘ಮಲ್ಯ ಒಂದೂ ರೂಪಾಯಿ ಪಾವತಿಸದಿದ್ದರೂ, ಹಣ ಮರುಪಾವತಿ ಕುರಿತ ಪ್ರಸ್ತಾಪ ಬಾಕಿ ಉಳಿದಿದೆ ಎಂದು ನೆಪ ಹೇಳುತ್ತಿದ್ದಾರೆ’ ಎಂದು ಮೆಹ್ತಾ ಮಾತಿಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠ ಈ ಪ್ರತಿಕ್ರಿಯೆ ನೀಡಿತು. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.