ನವದೆಹಲಿ: ‘ಭಾರತೀಯ ಸೇನೆಗೆ ಹೆಚ್ಚಿನ ಪ್ರಮಾಣದಲ್ಲಿ ದೇಶೀಯ ತಂತ್ರಜ್ಞಾನ ಬಳಸಲು ಒತ್ತು ನೀಡಿದ್ದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ಬಳಸಿಯೇಭಾರತ ಮುಂದಿನ ಯುದ್ಧ ಗೆಲ್ಲಲಿದೆ’ ಎಂದು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದರು.
ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ನಿರ್ದೇಶಕರ 41ನೇ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ಇತರೆ ಸೌಲಭ್ಯಗಳನ್ನು ‘ಭವಿಷ್ಯದ ಯುದ್ಧಸ್ಥಿತಿ’ ಗಮನದಲ್ಲಿಟ್ಟುಕೊಂಡೇ ರೂಪಿಸಬೇಕು’ ಎಂದರು. ‘ಭವಿಷ್ಯದ ಯುದ್ಧಸ್ಥಿತಿ ಎಂದರೆ ಅದು ನೇರ ಸಂಘರ್ಷವೇ ಆಗಬೇಕೆಂದಿಲ್ಲ. ಹೊಸ ರೂಪದ್ದೂ ಆಗಿರಬಹುದು. ಹೀಗಾಗಿ, ನಾವು ಬಾಹ್ಯಾಕಾಶ, ಸೈಬರ್ಸ್ಪೇಸ್, ಲೇಸರ್, ವಿದ್ಯುನ್ಮಾನ, ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿಯೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ’ ಎಂದು ರಾವತ್ ಪ್ರತಿಪಾದಿಸಿದರು. ‘ತಕ್ಷಣದಿಂದಲೇ ಹೊಸ ಸಾಧ್ಯತೆಗಳತ್ತ ಚಿಂತಿಸುವ ಅಗತ್ಯವಿದೆ ಎಂದ ಅವರು, ಡಿಆರ್ಡಿಒ ಮಾಡಿದ ಸಾಧನೆಗಳಿಂದ ಸೇನೆಗೆ ಸಾಕಷ್ಟು ನೆರವಾಗಲಿವೆ’ ಎಂದರು.
‘ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣ ದಲ್ಲಿ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆದರೆ, ಕೆಲ ವರ್ಷಗಳಿಂದ ಪರಿಸ್ಥಿತಿ ಬದಲಾಗುತ್ತಿದೆ. ಡಿಆರ್ಡಿಒ ದೇಶೀಯವಾಗಿಯೇ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.