ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ನಿರ್ದೇಶಕರ 41ನೇ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ಇತರೆ ಸೌಲಭ್ಯಗಳನ್ನು ‘ಭವಿಷ್ಯದ ಯುದ್ಧಸ್ಥಿತಿ’ ಗಮನದಲ್ಲಿಟ್ಟುಕೊಂಡೇ ರೂಪಿಸಬೇಕು’ ಎಂದರು. ‘ಭವಿಷ್ಯದ ಯುದ್ಧಸ್ಥಿತಿ ಎಂದರೆ ಅದು ನೇರ ಸಂಘರ್ಷವೇ ಆಗಬೇಕೆಂದಿಲ್ಲ. ಹೊಸ ರೂಪದ್ದೂ ಆಗಿರಬಹುದು. ಹೀಗಾಗಿ, ನಾವು ಬಾಹ್ಯಾಕಾಶ, ಸೈಬರ್ಸ್ಪೇಸ್, ಲೇಸರ್, ವಿದ್ಯುನ್ಮಾನ, ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿಯೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ’ ಎಂದು ರಾವತ್ ಪ್ರತಿಪಾದಿಸಿದರು. ‘ತಕ್ಷಣದಿಂದಲೇ ಹೊಸ ಸಾಧ್ಯತೆಗಳತ್ತ ಚಿಂತಿಸುವ ಅಗತ್ಯವಿದೆ ಎಂದ ಅವರು, ಡಿಆರ್ಡಿಒ ಮಾಡಿದ ಸಾಧನೆಗಳಿಂದ ಸೇನೆಗೆ ಸಾಕಷ್ಟು ನೆರವಾಗಲಿವೆ’ ಎಂದರು.