ಕೊಲ್ಕತ್ತಾ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರ ಕೈವಾಡವಿದೆ ಎಂದು ಬಿಜೆಪಿರಾಷ್ಟ್ರೀಯ ಘಟಕದ ಕಾರ್ಯದರ್ಶಿ ರಾಹುಲ್ ಸಿನ್ಹಾ ಶಂಕಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾದರೆ ರಾಷ್ಟ್ರಪತಿ ಆಳ್ವಿಕೆ ಹೇರಲು ವಿನಂತಿಸಬೇಕಾಗಬಹುದು ಎಂದು ಭಾನುವಾರ ಎಚ್ಚರಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಸರಿಸುತ್ತಿರುವಓಲೈಕೆ ರಾಜಕಾರಣವೇ ಪಶ್ಚಿಮ ಬಂಗಾಳದ ಇಂದಿನ ಸ್ಥಿತಿಗೆ ಕಾರಣ ಎಂದು ಆರೋಪಿಸಿರುವ ಅವರು, ಎಲ್ಲ ಮುಗಿದ ಮೇಲೆ ಶಾಂತಿ ಕಾಪಾಡಿ ಎಂಬ ಮಾಮೂಲಿ ಹೇಳಿಕೆ ನೀಡುತ್ತಿದ್ದಾರೆ ಮಮತಾ ಬ್ಯಾನರ್ಜಿ ಎಂದು ದೂರಿದರು.
ಪೌರತ್ಮ ತಿದ್ದುಪಡಿ ಮಸೂದೆ ಕಾಯ್ದೆಯನ್ನು ವಿರೋಧಿಸಿ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವ್ಯಾಪಕ ಹಿಂಸಾಚಾರವನ್ನು ನಿಯಂತ್ರಿಸಲುಮಮತಾ ಅತ್ಯಲ್ಪ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಾವು ಎಂದಿಗೂ ರಾಷ್ಟ್ರಪತಿ ಆಡಳಿತವನ್ನು ಬೆಂಬಲಿಸುವುದಿಲ್ಲ. ಆದರೆ ಇದೇ ರೀತಿ ಅರಾಜಕತೆ ಮುಂದುವರಿದರೆ ನಮಗೆ ಬೇರೆ ಮಾರ್ಗ ಉಳಿಯುವುದಿಲ್ಲ ಎಂದು ಸಿನ್ಹಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಪಶ್ಚಿಮ ಬಂಗಾಳದ ಮುಸ್ಲಿಂ ಸಮುದಾಯದ ಪಾತ್ರ ಎಳ್ಳಷ್ಟೂ ಇಲ್ಲ. ಇದಕ್ಕೆಲ್ಲಾ ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ಮುಸ್ಲಿಂ ವಲಸಿಗರೇ ಕಾರಣ. ಈ ಬಗ್ಗೆ ಸ್ಥಳೀಯ ಮುಸ್ಲಿಮರಲ್ಲಿ ಜಾಗೃತಿ ಮೂಡಿಸಬೇಕಿದೆ. ಅವರ ಮನಸ್ಸನ್ನು ದುಷ್ಕರ್ಮಿಗಳು ಹಾಳುಮಾಡುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.