ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ನಲ್ಲಿ ಶನಿವಾರ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
'ಬೆಳಿಗ್ಗೆ 8ರಿಂದ 12ರ ವರೆಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.ಸ್ವಾಮೀಜಿ ಅವರು ಚೇತರಿಸಿಕೊಂಡಿದ್ದಾರೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಚಿಕಿತ್ಸೆ ನೆರವೇರಿಸಿದ ಡಾ.ಮಹಮ್ಮದ್ ರೇಲಾ ತಿಳಿಸಿದ್ದಾರೆ.
‘ಪಿತ್ತನಾಳದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದ ಭಾಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಪಿತ್ತನಾಳವನ್ನು ಸಣ್ಣ ಕರುಳಿಗೆ ಜೋಡಿಸಲಾಗಿದೆ. ಈ ಮೊದಲು ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್ಗಳನ್ನು ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಗೆ ಸ್ವಾಮೀಜಿ ಉತ್ತಮವಾಗಿ ಸ್ಪಂದಿಸಿದರು’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗುವ ಸ್ವಲ್ಪ ಹೊತ್ತಿಗೂ ಮುನ್ನ ಶಿವಕುಮಾರ ಸ್ವಾಮೀಜಿ ಅವರು ಮಠದ ಸಿಬ್ಬಂದಿಯ ನೆರವಿನಲ್ಲಿ ಆಸ್ಪತ್ರೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು
‘ಪ್ರಜ್ಞೆ ಬಂದ ನಂತರ ಸ್ವಾಮೀಜಿ ಎಂದಿನ ರೀತಿಯಲ್ಲಿಯೇ ಜೊತೆಯಲ್ಲಿ ಇದ್ದವರೊಂದಿಗೆ ಮಾತನಾಡಿದರು. ಭಕ್ತರು ಆತಂಕ ಪಡುವ ಅಗತ್ಯ ಇಲ್ಲ. ಕನಿಷ್ಠ 7ರಿಂದ 8 ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ಸ್ವಾಮೀಜಿ ಅವರ ಜೊತೆಯಲ್ಲಿರುವ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.