ಬೆಂಗಳೂರು: ಇದೇ 12ರಂದು ರಾಜ್ಯದಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದು, ವಾಹನಗಳಲ್ಲಿ ಪ್ರಾಣಿಗಳನ್ನು ಸಾಗಿಸಲು ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ರಕ್ಷಣೆ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಶಾಸಕರು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಹಬ್ಬದ ವಿಶೇಷವಾಗಿ ಪ್ರಾಣಿ ಬಲಿ ನೀಡಿ, ಅದನ್ನು ಬಡ ವರ್ಗದವರಿಗೆ ದಾನವಾಗಿ ನೀಡಲಾಗುತ್ತದೆ. ಹಿಂದಿನಿಂದಲೂ ಬಲಿ ಕೊಡುವ ಮೂಲಕ ಹಬ್ಬ ಆಚರಿಸಿಕೊಂಡು ಬರಲಾಗಿದೆ. ಈ ಸಮಯದಲ್ಲಿ ಹಬ್ಬದ ಆಚರಣೆಗೆ ಯಾವುದೇ ಅಡಚಣೆ ಆಗದಂತೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕರಾದ ತನ್ವೀರ್ ಸೇಠ್, ರಹೀಂ ಖಾನ್, ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹಿಂ, ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಪತ್ರಕ್ಕೆ ಸಹಿ ಮಾಡಿದ್ದಾರೆ.