ಬೆಂಗಳೂರು: ‘ಏರ್ಷೋ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅನಾಹುತಕ್ಕೆ ಒಳಗಾಗಿರುವ ಕಾರುಗಳಿಗೆ ವಾಹನ ವಿಮೆ ಪಡೆಯಲು ಕನಿಷ್ಠ ಮೂರು ವಾರಗಳಿಂದ ನಾಲ್ಕು ವಾರಗಳು ಬೇಕು.ಸ್ಥಳದಲ್ಲಿಯೇ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ' ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ನ ಉಪ ಪ್ರಧಾನ ವ್ಯವಸ್ಥಾಪಕ ಚಿರಂಜೀವಿ ರೆಡ್ಡಿ ಅವರು ತಿಳಿಸಿದರು.
‘ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್ಸಿ ಇದ್ದರೆ ವಿಮೆ ಹಣಕ್ಕೆ ಅರ್ಜಿ ಸಲ್ಲಿಸಬಹುದು. ವಿಮೆಯ ಘೋಷಿತ ಮೌಲ್ಯದ (ಐಡಿವಿ) ಮೇಲೆ ಪರಿಹಾರ ಮೊತ್ತ ನಿರ್ಧಾರವಾಗಲಿದೆ‘ ಎಂದು ಅವರು ಹೇಳಿದರು.
‘ಘಟನೆ ನಡೆದ 24 ಗಂಟೆಯ ಒಳಗಾಗಿ ಆಯಾ ವಿಮಾ ಕಂಪನಿಗಳ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಪಾಲಿಸಿ ಸಂಖ್ಯೆ ಮತ್ತು ಆರ್ಸಿಯಲ್ಲಿರುವ ಮಾಹಿತಿ ನೀಡಿ, ಕ್ಲೈಮ್ ರೆಜಿಸ್ಟರ್ ಮಾಡಿಕೊಂಡರೆ ಪರಿಹಾರ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ.ಆಗ ಕಂಪನಿಯವರು ಒಂದು ರೆಫರೆನ್ಸ್ ನಂಬರ್ ನೀಡುತ್ತಾರೆ. ಅದಾದ ಬಳಿಕ ಕಂಪನಿಯಿಂದ ತನಿಖಾ ಅಧಿಕಾರಿ ಪರಿಶೀಲನೆ ನಡೆಸುತ್ತಾರೆ. ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ' ಎಂದುಟಾಟಾ ಎಐಜಿ ಇನ್ಸೂರೆನ್ಸ್ನರಿಲೇಷನ್ಶಿಪ್ ಮ್ಯಾನೇಜರ್ರತ್ನಕಲಾ ವಿ. ಮಾಹಿತಿ ನೀಡಿದರು.
‘ಕಾರಿಗೆ ಶೇ 75ರಷ್ಟು ಹಾನಿಯಾಗಿದ್ದರೆ ವಿಮೆಯ ಘೋಷಿತ ಮೌಲ್ಯ (ಐಡಿವಿ) ಶೇ 100ರಷ್ಟು ಸಿಗುತ್ತದೆ. ಆ ವಾಹನವನ್ನು ವಿಮಾ ಕಂಪನಿಯವರು ತಮ್ಮ ವಶಕ್ಕೆ ಪಡೆಯುತ್ತಾರೆ.ಉದಾಹರಣೆಗೆ:2019ರ ಮಾದರಿಯ ಹುಂಡೈ ಐ20 ಬೆಲೆ ₹ 7.5 ಲಕ್ಷ ಇದೆ ಎಂದುಕೊಂಡರೆ, ಎಕ್ಸ್ ಷೋರೂಂ ಮೌಲ್ಯದಲ್ಲಿ ಶೇ 5ರಷ್ಟು ಕಡಿತವಾಗಿರುತ್ತದೆ. ಆಗ ಐಡಿವಿ ₹ 7 ಲಕ್ಷ ಆಗುತ್ತದೆ.ಕಾಂಪ್ರಹೆನ್ಸಿವ್ ವಿಮೆಯಲ್ಲಿ ಐಡಿವಿಯ ಶೇ 90ರಷ್ಟು, ಬಂಪರ್ ಟು ಬಂಪರ್ ವಿಮೆಯಲ್ಲಿ ಶೇ 100 ಪರಿಹಾರ ಸಿಗಲಿದೆ.
‘ಯಾವ ಕಾರಣದಿಂದ ಅನಾಹುತ ಸಂಭವಿಸಿದೆ ಎನ್ನುವುದು ಖಚಿತವಾಗಿಲ್ಲ. ಒಂದು ಕಾರಿನಲ್ಲಿದ್ದಗ್ಯಾಸ್ ಸಿಲಿಂಡರ್ ಸ್ಫೊಟಗೊಂಡು ಈ ಅನಾಹುತ ಆಗಿದೆ ಎನ್ನುವ ಸುದ್ದಿ ಇದೆ. ಇದು ಖಚಿತವಾದರೆ, ಆ ಒಂದು ಕಾರಿನ ಪಾಲಿಸಿಯಿಂದಲೇ ಎಲ್ಲಾ ಕಾರುಗಳಿಗೆ ಆಗಿರುವ ಹಾನಿಗೂ ಪರಿಹಾರ ಪಡೆಯಬಹುದು. ಆದರೆ, ಇಂತಹ ಅನಾಹುತಗಳು ಸಂಭವಿಸಿದಾಗ ಅದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ತಿಳಿಯುವುದಿಲ್ಲ. ಹೀಗಾಗಿ ವೈಯಕ್ತಿಕವಾಗಿಯೇ ಎಲ್ಲರೂ ಕ್ಲೈಮ್ ಮಾಡಿಕೊಳ್ಳುತ್ತಾರೆ.
‘ವಿಮೆಯನ್ನು ಪ್ರತಿ ವರ್ಷ ನವೀಕರಿಸಬೇಕು. ವಿಮೆ ಕಂತು ಕಟ್ಟದೇ ಬಾಕಿ ಉಳಿಸಿಕೊಂಡಿದ್ದರೆ ಆಗ ಒಂದು ರೂಪಾಯಿಯೂ ಪರಿಹಾರ ಸಿಗುವುದಿಲ್ಲ. ವಿಮೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಅನಾಹುತದಲ್ಲಿ ನಾಶವಾಗಿದ್ದರೆ, ಅಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ವಿಮಾ ಕಂಪನಿಗೆ ವಾಹನದ ಸಂಖ್ಯೆಯನ್ನು ನೀಡಿ ಪಾಲಿಸಿ ಸಂಖ್ಯೆ ಪಡೆಯಬಹುದು’ ಎಂದು ರತ್ನಕಲಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.