ಬೆಂಗಳೂರು:‘ನಮ್ಮದು ಗಣಿ ಕುಟುಂಬ. ಗಣಿ ಕಂಪನಿ ಅಂದ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಪ್ರಕರಣಗಳು ಸಹಜ’ ಎಂದು ಅರಣ್ಯ ಸಚಿವ ಆನಂದ ಸಿಂಗ್ ಅವರು ಹಾರಿಕೆಯ ಉತ್ತರ ನೀಡಿದ್ದಾರೆ.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿ, ‘ಇದುಹಿತಾಸಕ್ತಿಗಳ ಸಂಘರ್ಷವಲ್ಲ. ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇದ್ದಂತೆ, ನಮ್ಮ ಗಣಿ ಕಂಪನಿ ವಿರುದ್ಧ ಕೇಸ್ ದಾಖಲಾಗಿದೆ’ ಎಂದು ಹೇಳಿದರು.
‘ಪೂರ್ವಜರ ಕಾಲದಿಂದಲೂ ಗಣಿಗಾರಿಕೆ ನಡೆಸುತ್ತಿರುವ ಕುಟುಂಬ ನಮ್ಮದು. ಆದ್ದರಿಂದ ಸಣ್ಣ ಪುಟ್ಟ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಅರಣ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಅವರು ತಿಳಿಸಿದರು.
‘ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ ಎಂಬುದು ಅವರಿಗೆ ಗೊತ್ತಿರುವುದರಿಂದ ಖಾತೆ ಬದಲಾವಣೆ ಮಾಡಿರಬಹುದು’ ಎಂದು ಆನಂದಸಿಂಗ್ ಹೇಳಿದರು.
15 ಪ್ರಕರಣಗಳು ಬಾಕಿ: ಆನಂದಸಿಂಗ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ, ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ವಿವಿಧ ಕಲಂಗಳಡಿ 15 ಮೊಕದ್ದಮೆಗಳನ್ನು ದಾಖಲಿಸಿದ್ದು, ಅವು ಇತ್ಯರ್ಥವಾಗಿಲ್ಲ ಎಂದು ನಮೂದಿಸಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆಯ 15 ರಡಿ ಅಕ್ರಮ ಗಣಿಗಾರಿಕೆ ಕಾರಣಕ್ಕಾಗಿ 11 ಮೊಕದ್ದಮೆಗಳನ್ನು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡವು ದಾಖಲಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಮೂರು ಪ್ರಕರಣಗಳನ್ನು ಸಿಬಿಐ ಮತ್ತು ಒಂದು ಪ್ರಕರಣವನ್ನು ಅರಣ್ಯ ಇಲಾಖೆ ದಾಖಲಿಸಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಆನಂದ ಸಿಂಗ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
‘ಸಿಂಗ್ ಮೇಲೆ ಇರುವುದು ಆರೋಪ, ಅದು ಸಾಬೀತಾಗಿಲ್ಲ. ಈ ಪ್ರಕರಣಗಳು ಇತ್ಯರ್ಥವಾದ ಬಳಿಕ ಪಕ್ಷ ಈ ಬಗ್ಗೆ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತದೆ’ ಎಂದು ಸವದಿ ಹೇಳಿದರು.