ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಆಯುಧ ಪೂಜೆಯನ್ನು ಜನರು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು.
ಗುರುವಾರ ಬಹುತೇಕ ಕಚೇರಿಗಳು, ಕಂಪನಿಗಳಿಗೆ ರಜೆ ಇದುದ್ದರಿಂದಬೆಂಗಳೂರಿನ ಜನರು ಬುಧವಾರವೇ ಹಬ್ಬ ಆಚರಿಸಿ ಸಂಭ್ರಮಿಸಿದರು. ಅಂಗಡಿ ಮಾಲೀಕರು ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಗುರುವಾರ ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು, ಕಲ್ಬುರ್ಗಿ ಸೇರಿದಂತೆರಾಜ್ಯದಾದ್ಯಂತ ಜನರ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು. ಇಂದು ಕೂಡ ಹೂವು, ಹಣ್ಣು ಖರೀದಿಯ ವ್ಯಾಪಾರ ಜೋರಾಗಿತ್ತು.
ಮನೆಗಳ ಎದುರು ಬೆಳಿಗ್ಗೆಯಿಂದಲೇ ರಂಗೋಲಿಗಳು ಕಂಗೊಳಿಸುತ್ತಿದ್ದವು. ಮನೆಗಳ ಎದುರು ವಾಹನಗಳನ್ನು ನಿಲ್ಲಿಸಿ, ಬೂದಗುಂಬಳ ಕಾಯಿ ಒಡೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬಂತು. ವಾಹನಗಳಿಗೆ ಹೂವಿನ ಹಾರ ಹಾಕಿ ಸಿಂಗರಿಸಲಾಗಿತ್ತು.
ಬಹುತೇಕ ಪ್ರಸಿದ್ಧ ದೇವಸ್ಥಾನಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. ನಗರ ಪ್ರದೇಶಗಳಲ್ಲಿ ಸೈಕಲ್, ಬೈಕ್, ಕಾರು, ಜೀಪು ಸೇರಿದಂತೆ ವಾಹನಗಳಿಗೆ ಅಲಂಕರಿಸಿ ಜನರು ಸಂಭ್ರಮಿಸಿದರು.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ಜನರು ಕೃಷಿ ಪರಿಕರಗಳು, ಟ್ಯಾಕ್ಟರ್ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ಪೂಜಿಸಿ ಆಯುಧ ಪೂಜೆಯನ್ನು ಆಚರಿಸಿದರು.