ಬೆಂಗಳೂರು: ‘ಯುನಾನಿ ವೈದ್ಯ ವಿಜ್ಞಾನದಲ್ಲಿ ಕಾಯಿಲೆಗಳಿಗೆ ಶಾಶ್ವತ ಪರಿಹಾರಗಳು ಇವೆ. ಅಡ್ಡ ಪರಿಣಾಮಗಳಿಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಹೇಳಿದರು.
ಆಯುಷ್ ಇಲಾಖೆಯು ಹಕೀಂ ಅಜ್ಮಲ್ ಖಾನ್ ಅವರ 151ನೇ ಜನ್ಮ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಯುನಾನಿ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
‘ಇಂದು ದಿನಕ್ಕೊಂದು ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ.ಸವೆ. ಯುನಾನಿ, ಆಯುರ್ವೇದಲ್ಲಿ ಅವುಗಳಿಗೆ ಪರಿಹಾರ ಇದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದರು.
ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ, ‘ಈ ದಿನಾಚರಣೆಯಲ್ಲಿ ನೀವು ಮಂಡನೆ ಮಾಡಿದ ಅಧ್ಯಯನ ಪತ್ರಿಕೆಗಳ ಜ್ಞಾನವನ್ನು ವೃತ್ತಿ ಬದುಕಿನಲ್ಲಿ ಅನುಷ್ಠಾನಕ್ಕೆ ತನ್ನಿ’ ಎಂದು ಯುನಾನಿ ಕೋರ್ಸ್ ಪದವೀಧರರಿಗೆ ಕಿವಿಮಾತು ಹೇಳಿದರು.
ಐದೂವರೆ ವರ್ಷಗಳ ಕಲಿಕೆಯ ಬ್ಯಾಚುಲರ್ ಆಫ್ ಯುನಾನಿ ಮೆಡಿಷನ್ ಆ್ಯಂಡ್ ಸರ್ಜರಿ ಕೋರ್ಸ್ ಮುಗಿಸಿದ 47 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.