ಬೆಳಗಾವಿ: ‘ಪ್ರವಾಹ ಪೀಡಿತ ಜನರಿಗೆ ಮನೆ ಕಟ್ಟಿಸಿಕೊಡದಿದ್ದರೆ ಈ ಸರ್ಕಾರವನ್ನೇ ಕೆಡುವುತ್ತೇನೆ’ ಎಂದು ಅರಭಾವಿ ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ತಮ್ಮ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.
ಘಟಪ್ರಭಾ ನದಿ ದಂಡೆಯ ಮೂಡಲಗಿ ತಾಲ್ಲೂಕಿನ ತಿಗಡಿ ಗ್ರಾಮಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಪ್ರವಾಹಕ್ಕೆ ಸಿಕ್ಕು ಬಿದ್ದು ಹೋಗಿರುವ ನಿಮ್ಮ ಮನೆಗಳನ್ನು ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಮನೆಗಳನ್ನು ಕಟ್ಟಿಸಿಕೊಡದಿದ್ದರೆ ಈ ಸರ್ಕಾರವನ್ನೇ ಕೆಡುವುತ್ತೇನೆ’ ಎಂದು ಗುಡುಗಿದರು. ಇದನ್ನು ಕೇಳಿದ ಸಂತ್ರಸ್ತರು, ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.
2011ರಲ್ಲಿಯೂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರವನ್ನು ಕೆಡವಲು ಬಾಲಚಂದ್ರ ಪ್ರಯತ್ನಿಸಿದ್ದನ್ನು ಸ್ಮರಿಸಬಹುದು.