ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಉಪಮೇಯರ್ ಚುನಾವಣೆ: ಭದ್ರೇಗೌಡ ಅವಿರೋಧ ಆಯ್ಕೆ

Last Updated 5 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಉಪಮೇಯರ್ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಭದ್ರೇಗೌಡ ಅವರು ಬುಧವಾರ ಅವಿರೋಧವಾಗಿ ಆಯ್ಕೆ ಆದರು.

‘ಉಪ ಮೇಯರ್ ಹುದ್ದೆಗೆ ಭದ್ರೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾಗಿ, ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ’ಎಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ ಪ್ರಕಟಿಸಿದರು.

12 ಸ್ಥಾಯಿ ಸಮಿತಿಗಳಿಗೆಕೇವಲ ಮೂರು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ನಾಮಪತ್ರ ಸಲ್ಲಿಕೆಗೆ12.30ರ ವರೆಗೆ ಅವಕಾಶ ನೀಡುವುದಾಗಿ ಚುನಾವಣಾಧಿಕಾರಿ ತಿಳಿಸಿದರು.

ಉಪಮೇಯರ್‌ ಆಗಿದ್ದ ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

ಬಿ.ಕಾಂ. ಪದವೀಧರರಾಗಿರುವ ಭದ್ರೇಗೌಡ ಅವರು ನಾಗಪುರ ವಾರ್ಡ್‌ನ ಸದಸ್ಯರು. ಮೊದಲ ಬಾರಿ ಕಾರ್ಪೊರೇಟರ್‌ ಆಗಿರುವ ಅವರು ಈ ಹಿಂದೆ ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಹಸಿರು, ಸ್ವಚ್ಛ ಬೆಂಗಳೂರು: ಸುದ್ದಿಗಾರರ ಜೊತೆ ಮಾತನಾಡಿದ ಭದ್ರೇಗೌಡ,‘ನಗರದ ಸ್ವಚ್ಛತೆ ಹಾಗೂ ಹಸಿರಿನ ಸಂರಕ್ಷಣೆ ನನ್ನ ಪ್ರಥಮ ಆದ್ಯತೆ’ ಎಂದರು.

‘ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ನಾವು ಶೇ 70ರಷ್ಟು ಪ್ರಗತಿ ಸಾಧಿಸಿದ್ದೇವೆ. ಶೇ 100ರಷ್ಟು ಪ್ರಗತಿ ಸಾಧಿಸಬೇಕಾದರೆ ಜನರ ಸಹಕಾರ ಮುಖ್ಯ’ ಎಂದು ಹೇಳಿದರು.

‘110 ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸುವುದು ಹಾಗೂ ಮಹಿಳೆಯರ ಭದ್ರತೆ ದೃಷ್ಟಿಯಿಂದ ನಗರದ ಅಲ್ಲಲ್ಲಿ ಸಿ.ಸಿ.ಟಿ.ವಿ ಅಳವಡಿಸುವುದು, ಎಲಿವೇಟೆಡ್‌ ಕಾರಿಡಾರ್‌ ಹಾಗೂ ಮೇಲ್ಸೇತುವೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು.

ಭದ್ರೇಗೌಡ ಅವರ ಅಧಿಕಾರಾವಧಿ 10 ತಿಂಗಳು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT