ಬಾಗಲಕೋಟೆ: ಯಾರನ್ನೂ ಓಡಿಸುವ ಸ್ವಭಾವ ಹಿಂದೂ ಸಮಾಜದ್ದಲ್ಲ. ಮುಸಲ್ಮಾನರನ್ನು ದೇಶ ಬಿಟ್ಟು ಓಡಿಸುವುದಾಗಿದ್ದರೆ 1947ರಲ್ಲಿಯೇ ಓಡಿಸುತ್ತಿದ್ದೆವು ಎಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದರು.
ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ನವರು, ಕಮ್ಯುನಿಸ್ಟರ ಮಾತು ನಂಬಿ ಮೋಸ ಹೋಗಬೇಡಿ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ’ಎಂದು ಮುಸ್ಲಿಮರಿಗೆ ಖೂಬಾ ಮನವಿ ಮಾಡಿದರು.
‘ಕಾಂಗ್ರೆಸ್ ಸಿಎಎ ವಿಚಾರ ಮುಂದಿಟ್ಟುಕೊಂಡುಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶ ವಿಭಜನೆ ಮಾಡಲು ಹೊರಟಿದೆ. ಪ್ರತಿಭಟನೆ ನೆಪದಲ್ಲಿ ದೇಶದಲ್ಲಿ ಆಗಿರುವ ದಂಗೆಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಿರುವ ಹಾನಿಗೆ ಕಾಂಗ್ರೆಸ್ ಪಕ್ಷವೇ ಹೊಣೆ’ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಪೌರತ್ವ ತಿದ್ದಪಡಿ ಕಾಯ್ದೆ ದೇಶದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂಗತಿ. ಸ್ವಾಮಿ ವಿವೇಕಾನಂದರ ಹಿಂದಿನ ಹೆಸರು ನರೇಂದ್ರ. ನಮ್ಮ ಪ್ರಧಾನಿಯ ಹೆಸರು ನರೇಂದ್ರ ಇದರ ಹಿಂದೆ ಏನೋ ಒಂದು ಪೂರ್ವ ಜನ್ಮದ ಸಂಬಂಧವಿದೆ’ಎಂದು ಜೊಲ್ಲೆ ಹೇಳಿದರು.
‘ಗರೀಬಿ ಹಠಾವೋ ಘೋಷಣೆಯಿಂದ ಕಾಂಗ್ರೆಸ್ ನವರ ಬಡತನ ನಿವಾರಣೆ ಆಗಿದೆಯೇ ಹೊರತು ದೇಶದ ಜನರದ್ದಲ್ಲ’ಎಂದು ಜೊಲ್ಲೆ ಟೀಕಿಸಿದರು.