ನವದೆಹಲಿ: ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಮುಸ್ಲಿಂ ಹಾಗೂ ಕೆಳಜಾತಿಯವರ ವಿರೋಧಿ ಎಂಬ ’ಗ್ರಹಿಕೆ’ ಇದ್ದು, ಇದು 2019ರ ಲೋಕಸಭೆ ಚುನಾವಣೆ ವೇಳೆ ಪ್ರಮುಖ ಸವಾಲಾಗಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
‘ಸರ್ಕಾರ ಇದುವರೆಗೆ ಏನು ಮಾಡಿದ್ದರೂ ಅದು ಎಲ್ಲರಿಗಾಗಿ. ಅಲ್ಪ ಸಂಖ್ಯಾತ ವರ್ಗದವರಿಗಾಗಿಯೂ ಸಾಕಷ್ಟು ಯೋಜನೆಗಳನ್ನು ನೀಡಿದೆ. ಆದರೂ ಜನರ ಗ್ರಹಿಕೆ ಬದಲಾಗಿಲ್ಲ’ ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರೂ ಆಗಿರುವ ಪಾಸ್ವಾನ್ ಹೇಳಿದ್ದಾರೆ.
ವಿರೋಧ ಪಕ್ಷಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ತನ್ನ ಬಗೆಗಿನ ಜನರ ಧೋರಣೆಯನ್ನು ಬದಲಿಸುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸಬೇಕಿದೆ ಎಂದೂ ಅವರು ಸಲಹೆ ನೀಡಿದ್ದಾರೆ.