ಬೆಂಗಳೂರು:‘ಆಪರೇಷನ್ ಕಮಲದ ಆಡಿಯೊ ಪ್ರಕರಣದ ತನಿಖೆ ಹೊಣೆಯನ್ನು ಯಾವುದೇ ಕಾರಣಕ್ಕೂ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬಾರದು. ಒಂದು ವೇಳೆ ಒಪ್ಪಿಸಿದರೆ, 2008ರಿಂದ ಇಲ್ಲಿವರೆಗೆ ನಡೆದಿರುವ ಎಲ್ಲ ಪ್ರಕರಣಗಳನ್ನೂ ತನಿಖಾ ವ್ಯಾಪ್ತಿಗೆ ಸೇರಿಸಬೇಕು’ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಆಡಿಯೊ ವಿಷಯವಾಗಿ ಮಂಗಳವಾರ ಎರಡನೇ ದಿನವೂ ಪರ–ವಿರೋಧ ಚರ್ಚೆಗಳು ನಡೆದವು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯರು, ‘ಎಸ್ಐಟಿ ತನಿಖೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಈ ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಗೆ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಿದರು.
ತನಿಖೆಯನ್ನು ಎಸ್ಐಟಿಗೆ ವಹಿಸದೆ ಸದನ ಸಮಿತಿ ರಚಿಸಿ ಅದಕ್ಕೆ ನೀಡಬೇಕು. 15 ದಿನದಲ್ಲೇ ಬೇಕಿದ್ದರೆ ವರದಿ ತರಿಸಿಕೊಳ್ಳಿ ಎಂದು ಬಿಜೆಪಿಯ ಶಾಸಕರಾದ ಮಾಧುಸ್ವಾಮಿ, ಎಸ್.ಸುರೇಶ್ಕುಮಾರ್ ಸೇರಿದಂತೆ ಇತರ ಸದಸ್ಯರು ಒತ್ತಾಯಿಸಿದರು.