ಬೆಂಗಳೂರು/ವಿಜಯಪುರ: ಗಾಂಧೀಜಿ ಅವರ ಒಡನಾಡಿಯಾಗಿದ್ದಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ, ಆತ ಪಾಕಿಸ್ತಾನದ ಏಜೆಂಟ್’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿರುವುದು ಖಂಡನೆಗೆ ಗುರಿಯಾಗಿದೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ,‘ಸ್ವಾತಂತ್ರ್ಯಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಹೋರಾಟ ಮಾಡಿದ್ದಾರೆ. ಆದರೆ, ಅವರ ತತ್ವ, ಸಿದ್ಧಾಂತಗಳು ಬೇರೆ ಆಗಿದ್ದವು. ದೊರೆಸ್ವಾಮಿ ನಕಲಿ ಹೋರಾಟಗಾರ’ ಎಂದು ಹೇಳಿದ್ದಾರೆ.
‘ಪಾಕಿಸ್ತಾನ ನಮಗೆ ಬಚ್ಚಾ, ನಾವೇ ಅದರ ತಂದೆ. ಪಾಕಿಸ್ತಾನ ಹುಟ್ಟಿದ್ದೇ ನಮ್ಮಿಂದ. ಜವಾಹರಲಾಲ್ ನೆಹರೂ ಅವರ ಸ್ವಾರ್ಥದಿಂದ ಪಾಕಿಸ್ತಾನ ಹುಟ್ಟಿದೆ’ ಎಂದು ಹೇಳಿದರು.
‘ದೊರೆಸ್ವಾಮಿ ವಿರುದ್ಧ ಅತ್ಯಂತ ಕೀಳಾಗಿ ಮಾತನಾಡಿರುವ ಯತ್ನಾಳ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮಕೈಗೊಂಡು ಬಾಯಿ ಮುಚ್ಚಿಸಬೇಕು. ಇಲ್ಲ ಅದು ಸರ್ಕಾರದ ಅಭಿಪ್ರಾಯ ಎಂದು ಒಪ್ಪಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ದೊರೆಸ್ವಾಮಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿ ಯತ್ನಾಳ ಆಗಸಕ್ಕೆ ಉಗಿದು ತಮ್ಮ ಮುಖಕ್ಕೆ ಸಿಡಿಸಿಕೊಂಡಿರುವುದು ಚೋದ್ಯ
-ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
***
ಒಬ್ಬರಾದ ಮೇಲೆ ಒಬ್ಬರಂತೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ನಾಲಿಗೆಗೆ ತಕ್ಷಣ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ