‘ಕುಮಟಾದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯೊಬ್ಬರಿಗೆ ತಕ್ಷಣವೇ ‘O+’ ರಕ್ತ ಬೇಕಿದೆ. ಯಾರಾದರೂ ದಾನಿಗಳಿದ್ದರೆ ಕೂಡಲೇ ತಿಳಿಸಿ..’
‘ನಾನು ಇಲ್ಲೇ ಇದ್ದೇನೆ.. ಐದೇ ನಿಮಿಷದಲ್ಲಿ ಬಂದೆ...’
‘ಆನೇಕಲ್ನ ಆಸ್ಪತ್ರೆಯಲ್ಲಿ ಹಿರಿಯರೊಬ್ಬರಿಗೆ ‘AB–’ ಗುಂಪಿನ ರಕ್ತ ಬೇಕು. ಸಮೀಪದಲ್ಲಿರುವ ಯಾರಾದರೂ ಸಹಾಯ ಮಾಡಿ...’
‘ಅಣ್ಣಾ.. ನಂದು ಅದೇ ಬ್ಲಡ್ ಗ್ರೂಪ್. ನಾನೀಗ್ಲೇ ಹೋಗ್ತೇನೆ..’
ಇವು ಕರ್ನಾಟಕ ರಕ್ತದಾನಿಗಳ ಗುಂಪಿನ ವ್ಯಾಟ್ಸ್ ಆ್ಯಪ್ ಗ್ರೂಪ್, ‘ರಕ್ತ ನೀಡಿ ಒಂದು ಜೀವ ಉಳಿಸಿ’ಯಲ್ಲಿ ನಡೆಯುವ ಸಂವಾದದ ಉದಾಹರಣೆಗಳು. ವಾಟ್ಸ್ಆ್ಯಪ್ನ 270 ಗ್ರೂಪ್ಗಳಲ್ಲಿ ಈ ರೀತಿಯ ಸಂವಹನ ನಿರಂತರವಾಗಿರುತ್ತದೆ.ಈ ಎಲ್ಲ ಗ್ರೂಪ್ಗಳ ಮೇಲುಸ್ತುವಾರಿಯನ್ನು ಕುಮಟಾದ ಶ್ರೀಧರ್ ಕುಮಟಾಕರ್ ನೋಡಿಕೊಳ್ಳುತ್ತಿದ್ದಾರೆ.
‘ನಾನು ಸದಸ್ಯನಾಗಿರುವ 1,114 ವಾಟ್ಸ್ಆ್ಯಪ್ ಗ್ರೂಪ್ಗಳಪೈಕಿ 270 ಗ್ರೂಪ್ಗಳು ರಕ್ತದಾನಿಗಳದ್ದೇ ಆಗಿದೆ. ಮಂಗಳೂರು, ಉತ್ತರ ಕನ್ನಡ, ಮಹಾರಾಷ್ಟ್ರದ ರತ್ನಗಿರಿ,ಬೆಂಗಳೂರು, ಆನೇಕಲ್ನಲ್ಲೂ ನಮ್ಮ ತಂಡದ ಸದಸ್ಯರಿದ್ದಾರೆ. ದಾನ ಮಾಡಿದ ರಕ್ತಕ್ಕೆ ನಯಾಪೈಸೆ ಪಡೆಯುವುದಿಲ್ಲ’ ಎಂದುಅವರು ಹೇಳುತ್ತಾರೆ.
‘ನಮ್ಮ ವಾಟ್ಸ್ಆ್ಯಪ್ ಗ್ರೂಪ್ಗಳ ಮುಖಾಂತರ ರಾಜ್ಯದ ವಿವಿಧೆಡೆ2,700 ಯೂನಿಟ್ಗಳಷ್ಟು ರಕ್ತದಾನ ಮಾಡಿದ್ದೇವೆ. ರೋಗಿ ಸಂಬಂಧಿಕರು ಅನುಕೂಲಸ್ಥರಾಗಿದ್ದು, ನಾವು ದೂರದ ಊರಿಗೆ ಹೋಗಬೇಕು ಎಂದಾದರೆಅವರಿಂದ ವಾಹನದ ಬಾಡಿಗೆ ಹಣವನ್ನು ಪಡೆಯುತ್ತೇವೆ. ಬಡವರಾಗಿದ್ದರೆ ವಾಟ್ಸ್ಆ್ಯಪ್ ಗ್ರೂಪ್ ಸದಸ್ಯರೇ ತಲಾ ₹100ರಂತೆ ಒಟ್ಟು ಸೇರಿಸಿ ಬಾಡಿಗೆ ಪಾವತಿಸುತ್ತೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
‘ಉತ್ತರ ಕನ್ನಡ ಜಿಲ್ಲೆಯಲ್ಲಿ 4,800 ರಕ್ತದಾನಿಗಳಿದ್ದಾರೆ. ಆದರೆ, ಶಿರಸಿ, ಕುಮಟಾ ಮತ್ತು ಕಾರವಾರದಲ್ಲಿ ಮಾತ್ರ ರಕ್ತನಿಧಿಗಳಿವೆ. ಹಾಗಾಗಿ ಜಿಲ್ಲೆಯಲ್ಲಿ ನಿರಂತರವಾಗಿ ರಕ್ತದಾನ ಮಾಡುತ್ತಿದ್ದರೆ ಇಲ್ಲಿ ರಕ್ತದ ಕೊರತೆಯಾಗಲು ಸಾಧ್ಯವೇಇಲ್ಲ’ ಎನ್ನುವುದು ಅವರ ಅಭಿಪ್ರಾಯ.
ಇವರ ಕಾರ್ಯಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವವರು ಕುಮಟಾದ ಅಚ್ಯುತ್ ಪಂಡಿತ್ ಆಸ್ಪತ್ರೆಯ ಡಾ.ಗೌತಮ್ ಪಂಡಿತ್.
‘ವಾಟ್ಸ್ಆ್ಯಪ್ ಗ್ರೂಪ್ನ ಸದಸ್ಯರಿಂದ ಮಂಗಳೂರು, ಉಡುಪಿ, ಕಾರವಾರ ಭಾಗದಲ್ಲಿ ಸಾಕಷ್ಟು ಉತ್ತಮ ಕೆಲಸವಾಗುತ್ತಿದೆ. ನೆಗೆಟಿವ್ ಗ್ರೂಪ್ ರಕ್ತವನ್ನೂ ಸುಲಭವಾಗಿ ವ್ಯವಸ್ಥೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆಯ ಮಾತನಾಡುತ್ತಾರೆ.