ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗಿದ ಕುಮಾರ, ಉಡುಗಿದ ಯಡಿಯೂರಪ್ಪ

Last Updated 14 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಜನಪ್ರಿಯ ಘೋಷಣೆ ಬಿಜೆಪಿಯಲ್ಲಿ ಚಾಲ್ತಿಯಲ್ಲಿತ್ತು.

ಆದರೆ, ಈ ಬಾರಿ ಇದಕ್ಕೆ ವ್ಯತಿರಿಕ್ತ ಬದಲಾವಣೆಯೇ ನಡೆದು ಹೋಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದ ಸದ್ದಿಗೆ ಯಡಿಯೂರಪ್ಪ ಅವರ ಜಂಘಾಬಲವೇ ಉಡುಗಿ ಹೋದಂತಾಗಿ ನೈತಿಕವಾಗಿ ಕುಗ್ಗಿ ಹೋದರು. ಅವರ ಸಿಡಿಸಿದ ‘ಆಪರೇಷನ್ ಆಡಿಯೊ ಬಾಂಬ್‌’ನಿಂದ ಯಡಿಯೂರಪ್ಪ ಮಾತ್ರವಲ್ಲ; ಬಿಜೆಪಿಯವರೆಲ್ಲ ನಡುಗಲಾರಂಭಿಸಿದರು. ಹೊರಗೆ ‘ಬೆತ್ತಲೆ’, ಮನೆಯೊಳಗೆ ಬಟ್ಟೆ ಹಾಕಿಕೊಂಡು ನಿಲ್ಲುವ ಸ್ಥಿತಿಯಂತೆ ಬಿಜೆಪಿಯ ಸಜ್ಜನರು ಮುಜುಗರ ಅನುಭವಿಸಿದರು.

ಬಜೆಟ್ ಅಧಿವೇಶನದೊಳಗೆ ಸರ್ಕಾರವನ್ನು ಕೆಡವಿಯೇ ಸಿದ್ಧ ಎಂಬ ಪಣತೊಟ್ಟು ಯಡಿಯೂರಪ್ಪ ಹೆಣೆದಿದ್ದ ‘ರಹಸ್ಯ’ ಬಲೆ ತಾರ್ಕಿಕ ಅಂತ್ಯ ಕಾಣಲಿದೆ ಎಂಬ ವಿಶ್ವಾಸ ಪಕ್ಷದಲ್ಲಿ ಮೂಡಿತ್ತು. ಬಜೆಟ್ ಮಂಡನೆಗೆ ಮುನ್ನ ಯಡಿಯೂರಪ್ಪ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್‌ ಅತೃಪ್ತ ಶಾಸಕರು ಪಾಲ್ಗೊಂಡು ರಾಜೀನಾಮೆ ಪ್ರಕಟಿಸಲಿದ್ದಾರೆ. ಬಜೆಟ್ ಪುಸ್ತಕದ ಸೂಟ್‌ಕೇಸ್‌ ಹಿಡಿದು ಕುಮಾರಸ್ವಾಮಿ ಸದನ ಪ್ರವೇಶಿಸುವುದರೊಳಗೆ ‘ಮೈತ್ರಿ ಕೋಟೆ’ಗೆ ಲಗ್ಗೆ ಇಟ್ಟು ಪದರುಪದರಾಗಿ ಸರ್ಕಾರವನ್ನು ಪತನಕ್ಕೆ ದೂಡಲಿದ್ದೇವೆ ಎಂದೂ ಬಿಜೆಪಿಯ ಕೆಲವು ನಾಯಕರು ಹೇಳಿಕೊಂಡಿದ್ದರು.

ಆಪರೇಷನ್ ಕಮಲದ ಬಲೆಯನ್ನು ವಿಸ್ತರಿಸುವ ಇರಾದೆ ಇಟ್ಟುಕೊಂಡೇ ಅದಕ್ಕೆ ಮುನ್ನಾದಿನ ದೇವದುರ್ಗಕ್ಕೆ ಯಡಿಯೂರಪ್ಪ ತೆರಳಿದ್ದರು. ಆದರೆ, ತಾವು ನುಗ್ಗುತ್ತಿರುವುದು ಕುಮಾರಸ್ವಾಮಿ ಸಿದ್ಧಪಡಿಸಿದ್ದ ಬೋನಿಗೆ ಎಂಬುದು ಇಳಿಕಾಲದಲ್ಲಿರುವ ‘ರಾಜಾ ಹುಲಿ’ಗೆ ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಐದು ದಶಕಗಳ ಕಾಲ ಜೆಡಿಎಸ್‌ ವರಿಷ್ಠ ದೇವೇಗೌಡರ ಜತೆ ನಿಕಟ ಸಖ್ಯ ಹೊಂದಿರುವ ನಾಗನಗೌಡರ ಪುತ್ರ ಶರಣಗೌಡರನ್ನು ಅತಿಯಾದ ವಿಶ್ವಾಸದಿಂದಲೇ ಬಲೆಗೆ ಕೆಡವಿದ್ದರು. ‘ವ್ಯವಹಾರ’ದ ಮಾತು ಮುಗಿಸಿದ ಶರಣಗೌಡ, ನನ್ನ ತಂದೆಗೆ ಕರೆ ಮಾಡಿ ಒಪ್ಪಿಸುತ್ತೇನೆ ಎಂದು ಹೊರಗೆ ಬಂದು ರಾತ್ರಿ 11ರ ಹೊತ್ತಿಗೆ ಕರೆ ಮಾಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ. ಅಲ್ಲಿಯವರೆಗೂ ಅದರ ಸುಳಿವು ಮುಖ್ಯಮಂತ್ರಿಗೂ ಇರಲಿಲ್ಲ. ಆಗ ಶುರುವಾಗಿದ್ದು ಅಸಲಿ ಕಾರ್ಯಾಚರಣೆ. ಎಂಟು ತಿಂಗಳಿನಿಂದ ಸರ್ಕಾರ ಪತನದ ಹೊಂಚು ಹಾಕಿದ್ದವರಿಗೆ ಪಾಠ ಕಲಿಸುವ ಸದರಿ ಕುಮಾರಸ್ವಾಮಿ ಅವರದ್ದಾಗಿತ್ತು.

ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ ಅವರು ಶರಣಗೌಡ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರದ ನಿಜದ ರೂವಾರಿ. ಐದು ದಶಕಗಳಿಂದ ಗೌಡರ ಕುಟುಂಬದ ಅತ್ಯಾಪ್ತ ಒಡನಾಡಿಯಾಗಿರುವ ನಾಗನಗೌಡ ಕುಟುಂಬ ಜೆಡಿಎಸ್‌ಗೆ ಬರುವುದು ಅಸಾಧ್ಯ ಎಂದು ಗೊತ್ತಿದ್ದರೂ ಇಂತಹದೊಂದು ಸಾಹಸಕ್ಕೆ ಕೈಹಾಕಿದ್ದರ ಹಿಂದೆ ಯಡಿಯೂರಪ್ಪ ಅವರನ್ನು ಸಿಕ್ಕಿಸುವ ‘ತಂತ್ರ’ಗಾರಿಕೆ ಇತ್ತೆ ಎಂದು ಬಿಜೆಪಿಯವರೇ ಸಂಶಯ ಪಡುತ್ತಿರುವುದು ಹೊಸ ವಿದ್ಯಮಾನ.

‘ಆ‍ಪರೇಷನ್ ಪತನ’: ಬಜೆಟ್ ಮಂಡನೆಗೆ ಮುನ್ನವೇ ಅತೃಪ್ತ ಕಾಂಗ್ರೆಸ್–ಜೆಡಿಎಸ್ ಶಾಸಕರ ಗುಂಪು ಸರ್ಕಾರದಿಂದ ಹೊರಬರಲಿದೆ. ಮುಂಬೈನಲ್ಲಿ 10ಕ್ಕೂ ಹೆಚ್ಚು ಶಾಸಕರಿದ್ದು, ಮೊದಲು ನಾಲ್ವರು ಶಾಸಕರು ರಾಜೀನಾಮೆ ಕೊಡಲಿದ್ದಾರೆ. ಬಳಿಕ ರಾಜೀನಾಮೆ ಪರ್ವವೇ ರಾಜ್ಯದಲ್ಲಿ ನಡೆಯಲಿದೆ. ಕುಮಾರಸ್ವಾಮಿ 2009ರಲ್ಲಿ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲೇ ಅವರಿಗೆ ‘ಮರ್ಮದೇಟು’ ಕೊಡಲಿದ್ದೇವೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು.

ಅಧಿವೇಶನ ಮೊಟಕಾಗಿ ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಅವರ ಅಭಿಮಾನಿಗಳು ಸಂಭ್ರಮದಲ್ಲಿದ್ದರು. ಆದರೆ, ಆಡಿಯೊ ಹೊರಬಿದ್ದದ್ದೇ ತಡ ಬರಸಿಡಿಲು ಬಡಿದಿದ್ದು ಬಿಜೆಪಿ ಪಾಳಯಕ್ಕೆ. ‘ಮೈತ್ರಿ’ ನಾಯಕರ ಮುಖದಲ್ಲಿ ಮಂದಹಾಸ ಚಿಮ್ಮಿ, ಸರ್ಕಾರ ಇನ್ನಷ್ಟು ಕಾಲ ಸುರಕ್ಷಿತ ಎಂಬ ಭಾವನೆ ಮೊಳೆಯಿತು.

ಅಬ್ಬರ ಇಲ್ಲ ಸುಡು ಮೌನ: ಯಾವಾಗಲೂ ಅಬ್ಬರಿಸಿ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಉಮೇದಿನಲ್ಲಿ ಇರುತ್ತಿದ್ದ ಯಡಿಯೂರಪ್ಪ ಮುಖಕೆಂಪಗೆ ಮಾಡಿಕೊಂಡು ಮೌನಕ್ಕೆ ಶರಣಾಗಿದ್ದರು. ಆಪರೇಷನ್ ಮಾಡಲು ಕತ್ತಿ, ಕತ್ತರಿ ಹಿಡಿದುಕೊಂಡು ಹೋದ ವೈದ್ಯನೇ ‘ರೋಗಿ’ಯಾದ ಸ್ಥಿತಿಗೆ ಬಿಜೆಪಿ ತಲುಪಿ ಬಿಟ್ಟಿತ್ತು.

ಬಿಗಿಯಾದ ‘ಮೈತ್ರಿ’ಯ ಬಂಧ

ಆಪರೇಷನ್ ಆಡಿಯೊ ಸದ್ದು ಮಾಡುವ ಮೊದಲು ಕಾಂಗ್ರೆಸ್–ಜೆಡಿಎಸ್‌ ನಾಯಕರು ಕಿತ್ತಾಡಿಕೊಳ್ಳುವ ಹಂತ ತಲುಪಿದ್ದರು. ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ. ನಾಗರಾಜ್‌ ಅವರು, ‘ನಮ್ಮ ಪಾಲಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ’ ಎಂದು ಘೋಷಿಸಿದ್ದರು. ಇದು ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ದೂಡಿತ್ತು.

‘ಶಾಶ್ವತವಾಗಿ ಈ ಹುದ್ದೆಯಲ್ಲಿ ಗೂಟ ಬಡಿದುಕೊಂಡು ಕೂರುವ ಅನಿವಾರ್ಯ ಇಲ್ಲ. ಯಾವಾಗ ಬೇಕಾದರೂ ಹುದ್ದೆ ಬಿಟ್ಟು ಹೋಗಲ ಸಿದ್ಧ’ ಎನ್ನುವವರೆಗೂ ಕುಮಾರಸ್ವಾಮಿ ಹೆಜ್ಜೆ ಮುಂದಿಟ್ಟಿದ್ದರು. ಆದರೆ, ಬಿಜೆಪಿ ನಾಯಕರು ಯತ್ನ ಸೋತು, ಕುಮಾರ ಶಕ್ತಿ ಬಲಗೊಳ್ಳುತ್ತಿದ್ದಂತೆ ಮೈತ್ರಿಯಲ್ಲೂ ಒಗ್ಗಟ್ಟು ಬಲವಾಯಿತು. ಸದನದಲ್ಲಿ ಒಟ್ಟಾಗಿ ನಿಂತು ಬಿಜೆಪಿಗೆ ಪ್ರತಿರೋಧ ಒಡ್ಡಿದರು. ಅಷ್ಟರಮಟ್ಟಿಗೆ ಯಡಿಯೂರಪ್ಪ ಅವರು ‘ಮಿತ್ರ ಕೂಟ’ಕ್ಕೆ ಟಾನಿಕ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT