ತುಮಕೂರು: ಹೇಮಾವತಿ ನಾಲಾ ವೀಕ್ಷಣೆ ಕೈಗೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳನ್ನೆಲ್ಲ ರದ್ದು ಮಾಡಿ ಬೆಂಗಳೂರಿಗೆ ತೆರಳಿದರು.
ಕೆರೆಗಳಿಗೆ ನೀರು ತುಂಬುವ ನೀರಾವರಿ ಯೋಜನೆ ಕುರಿತ ಪೂರ್ವಭಾವಿ ಸಭೆ ಸಂಜೆ 5 ಗಂಟೆಗೆ ಸಿದ್ಧಗಂಗಾಮಠದಲ್ಲಿ ನಡೆಯಬೇಕಿತ್ತು. ಇದರಲ್ಲಿ ಯಡಿಯೂರಪ್ಪ ಅವರೂ ಭಾಗವಹಿಸಬೇಕಿತ್ತು.ಆದರೆ, ಅದನ್ನು ರದ್ದುಪಡಿ ಅವರು ಬೆಂಗಳೂರಿಗೆ ಹೊರಟರು. ಮಾರ್ಗ ಮಧ್ಯೆಎಡೆಯೂರು ಸಿದ್ಧಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದ ಬಿಎಸ್ವೈ ವಿಶೇಷ ಪೂಜೆಯನ್ನೂ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ಬಿಜೆಪಿಯ 105 ಶಾಸಕರು ಒಟ್ಟಾಗಿದ್ದೇವೆ. ಸರ್ಕಾದ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ, ಬೆಳೆಗೆ ಪ್ರಾರ್ಥಿಸಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನಾಲಾ ವೀಕ್ಷಣೆ ಮಾಡಿದ್ದೇನೆ ಎಂದರು. ದೇವೇಗೌಡರು ದಲಿತರನ್ನು ಮುಖ್ಯಮಂತ್ರಿ ಮಾಡುವ ಚಿಂತನೆ ಮಾಡಿದ್ದಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬೇರೆ ಪಕ್ಷದವರ ಬಗ್ಗೆ ನಾನೇನು ಮಾತನಾಡಲ್ಲ ಎಂದರು.
ಸಂಜೆ ಬೆಂಗಳೂರಿನಲ್ಲಿ ಪಕ್ಷದ ಮುಖಂಡರೊಂದಿಗೆ ರಾಜಕೀಯ ಬೆಳವಣಿಗೆಗಳ ಕುರಿತು ಯಡಿಯೂರಪ್ಪ ಅವರು ಚರ್ಚೆ ನಡೆಸಲಿದ್ದಾರೆ. ಇದೇ ಕಾರಣಕ್ಕೇ ಅವರು ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಅವರು ಬಾಗೂರು ನವಿಲೆ ಬಳಿ ಹೇಮಾವತಿ ನಾಲೆ ವೀಕ್ಷಣೆ ಮಾಡಿದರು.