ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ನಮ್ಮ ಪ್ರಧಾನಿ, ದೇವರಲ್ಲ

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್‌ ರೈ ಅಭಿಪ್ರಾಯ
Last Updated 7 ಮೇ 2018, 12:06 IST
ಅಕ್ಷರ ಗಾತ್ರ

ಹಾವೇರಿ: ‘ಮೋದಿ ನಮ್ಮ ಪ್ರಧಾನಿ, ದೇವರಲ್ಲ. ಅವರನ್ನು ಪ್ರಶ್ನಿಸುವ ಅಧಿಕಾರ ನಮಗೆಲ್ಲ ಇದೆ. ಉತ್ತರ ಭಾರತದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಅಪಾಯದಿಂದ ಬಿಜೆಪಿ ಕರ್ನಾಟಕದಲ್ಲಿ ಬಿಲ ಹುಡುಕುತ್ತಿದೆ’ ಎಂದು ನಟ ಪ್ರಕಾಶ್‌ ರೈ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೋದಿ ಮೌನವೂ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದ ಅವರು, ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿ ಬಗ್ಗೆ ಮಾತನಾಡಲಿಲ್ಲ. ಈಗ, ರಾಜ್ಯದ ಚುನಾವಣೆಯ ಕಾರಣ ಮಾತನಾಡಿದ್ದಾರೆ. ನನ್ನದು ಕೋಪ ಅಲ್ಲ, ಆವೇದನೆ, ಅದಕ್ಕಾಗಿ ಗಟ್ಟಿಯಾಗಿ ಮಾತನಾಡುತ್ತಿದ್ದೇನೆ. ನಾನು ಪ್ರಶ್ನಿಸುತ್ತಿರುವುದು ವಿಳಂಬವಾಗಿರಬಹುದು, ಆದರೆ, ಪ್ರಾಮಾಣಿಕತೆಯಿಂದ ಪ್ರಶ್ನಿಸುತ್ತಿದ್ದೇನೆ.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿನಾಥ ಆಡಳಿತದಲ್ಲಿ ಇರಲು ಸಾಧ್ಯವಿಲ್ಲ ಎಂದು ಅಲ್ಲಿನ ಐದು ದಲಿತ ನಾಯಕರು ಮೋದಿಗೆ ಪತ್ರ ಬರೆದಿದ್ದಾರೆ. ದಲಿತರ ಬಗ್ಗೆ ನಿಜವಾದ ಪ್ರೀತಿ ಇದ್ದರೆ, ಆ ಪತ್ರವನ್ನು ಓದಿ ಪರಿಹಾರ ನೀಡಲಿ. ಮೋದಿಯವರ ಸುಳ್ಳು ಮತ್ತು ಉದ್ದೇಶಗಳು ಜನರಿಗೆ ಅರ್ಥ ಆಗುತ್ತಿದೆ. ಅವರು 2019ರ ಅಂತ್ಯದಲ್ಲಿ ದೇಶದ ಪ್ರಧಾನಿ ಆಗಿರುವುದಿಲ್ಲ. ಅದಕ್ಕಾಗಿ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನೂ ತಪ್ಪಿಸಬೇಕಾಗಿದೆ.

‘ಮನುಷ್ಯ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಅಂತಹ ಜಾಲವನ್ನು ಬೆಳೆಸಲು ನಾನು ಸುತ್ತಾಡುತ್ತಿದ್ದೇನೆ. ‘ಜಸ್ಟ್‌ ಆಸ್ಕಿಂಗ್‌ ಅಭಿಯಾನ’ ಆರಂಭಿಸಿದ್ದೇನೆ. ಬೇರೆ ರಾಜ್ಯದಲ್ಲೂ ಈ ಅಭಿಯಾನ ಮಾಡುತ್ತೇನೆ. ಎಲ್ಲರೂ ತಮ್ಮ ಪ್ರತಿನಿಧಿಯನ್ನು ಪ್ರಶ್ನಿಸಬೇಕು. ಪರಿಹಾರ ಪಡೆದುಕೊಳ್ಳಲು ಪ್ರಶ್ನೆ ಕೇಳುತ್ತೇವೆ. ಆದರೆ, ಪ್ರಶ್ನಿಸಿದ ಜನರಿಗೆ ಉತ್ತರಿಸುವ ಬದಲಾಗಿ ಅವರ ವಿರುದ್ಧ ಅಪಪ್ರಚಾರ ಹಾಗೂ ತುಳಿಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ, ಗೌರಿ ಲಂಕೇಶ್ ಹತ್ಯೆ ಬಳಿಕ ನಾನು ತೀವ್ರವಾಗಿ ಪ್ರಶ್ನಿಸುತ್ತಿದ್ದೇನೆ.

‘ಪ್ರಶ್ನೆಗಳಿಗೆ ಉತ್ತರಿಸುವ ಬದಲಾಗಿ ಪ್ರಶ್ನಿಸುವವರ ಬಗ್ಗೆ ಅಪಪ್ರಚಾರ ಮಾಡುವ ಗುಣವೇ ಅಸಹ್ಯ. ಪ್ರಶ್ನಿಸುವ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಮತ್ತ ಫೇಕ್ ಸುದ್ದಿ ಮಾಡುತ್ತಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಆಸ್ತಿ ಇದೆ:

‘ನನಗೆ ನಾಲ್ಕು ರಾಜ್ಯಗಳಲ್ಲಿ ಬೇಕಾದಷ್ಟು ಆಸ್ತಿ ಇದೆ. ನನಗೆ ಕಾಂಗ್ರೆಸಿಗರು ಸೈಟು ನೀಡಿದರು ಎಂಬ ಆರೋಪಗಳಲ್ಲಿ ಹುರುಳಿಲ್ಲ. ನಾನೇ ಆರು ಎಕರೆ ಜಾಗ ಶಾಲೆಯೊಂದಕ್ಕೆ ನೀಡಿಡಿದ್ದೇನೆ. ಬಿಜೆಪಿಯವರೇ ಕೆದಕಿ ಕೆದಕಿ ನನ್ನನ್ನು ಪ್ರಶ್ನಿಸುವಂತೆ ಮಾಡಿದ್ದಾರೆ. ಅವರು ಕಲ್ಲು ಹೊಡೆದರೆ, ಕೆಲವರು ಓಡಿ ಹೋಗಬಹುದು. ಆದರೆ, ನಾನು ಅದೇ ಕಲ್ಲಿನಿಂದ ಮನೆ ಕಟ್ಟುತ್ತಿದ್ದೇನೆ. ಬೆಂಕಿ ಹಚ್ಚಿದರೆ, ದೀಪ ಬೆಳಗುತ್ತೇನೆ.

‘ಭ್ರಷ್ಟಾಚಾರಕ್ಕಿಂತ ದೇಶದ ಸಂವಿಧಾನ ಬದಲಾಯಿಸುವುದು ಮತ್ತು ಧರ್ಮ ಹೇರುವುದು ಆತಂಕಕಾರಿ. ಆ ಪಕ್ಷ ಅಧಿಕಾರಕ್ಕೆ ಬಂದರೆ, ಸಂವಿಧಾನ ಉಳಿಯುವುದಿಲ್ಲ. ಕೋಮುವಾದಕ್ಕೆ ಮುಗ್ಧ ಹಿಂದೂ ಯುವಕರನ್ನು ಬಳಸುತ್ತಿದ್ದಾರೆ. ಅಮಾಯಕರನ್ನು ಹುರಿದುಂಬಿಸಿ ಗಲಭೆ ಮಾಡಿಸುತ್ತಿದ್ದಾರೆ. ಚುನಾವಣೆಯ ಬಳಿಕ ಆ ಯುವಕರ ಹಾಗೂ ಕುಟುಂಬದ ಗತಿ ಕೇಳುವವರೇ ಇಲ್ಲದಂತಾಗುತ್ತದೆ’ ಎಂದು ರೈ ಆತಂಕ ಹೇಳಿದರು.

ಸಂವಾದ ಕಾರ್ಯಕ್ರಮ ರದ್ದು

ನಗರದ ನೌಕರರ ಭವನದಲ್ಲಿ ನಿಗದಿಯಾಗಿದ್ದ ಪ್ರಕಾಶ್‌ ರೈ ಸಂವಾದ ಕಾರ್ಯಕ್ರಮವು ಕೊನೆ ಕ್ಷಣದಲ್ಲಿ ರದ್ದಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಹೋದಲೆಲ್ಲ ಕಾರ್ಯಕ್ರಮ ರದ್ದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಪ್ರಶ್ನಿಸುತ್ತೇನೆ’ ಎಂದರು.

‘ನಾನು ಚುನಾವಣಾ ಕರ್ತವ್ಯದಲ್ಲಿದ್ದು, ಸಿಬ್ಬಂದಿ ಏನು ನಿರ್ಧಾರ ಕೈಗೊಂಡಿದ್ದಾರೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಹಾಲಪ್ಪನವರಮಠ ಸ್ಥಳ ರದ್ದಾದ ಕುರಿತು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಸಂವಾದಕ್ಕೆ ಅನುಮತಿ ನೀಡಿದ್ದೇವೆ. ಆದರೆ, ಬಳಿಕ ಬಂದ ಆಯೋಜಕರು ಸ್ಥಳದ ಸಮಸ್ಯೆಯಿಂದ ಸಂವಾದ ರದ್ದುಗೊಂಡ ಬಗ್ಗೆ ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

**
ಜಮ್ಮುಕಾಶ್ಮೀರದಲ್ಲಿ ಅತ್ಯಾಚಾರ ನಡೆದಿದೆ. ಆರೋಪಿಯನ್ನು ಕಾಪಾಡಲು ಬಿಜೆಪಿಯವರೇ ದೇಶದ ಧ್ವಜ ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದನ್ನು ಮೋದಿ ಏಕೆ ಪ್ರಶ್ನಿಸುತ್ತಿಲ್ಲ
– ಪ್ರಕಾಶ್ ರೈ, ಚಿತ್ರನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT