ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ 19 ಸದಸ್ಯರು ಗಡುವು ಮುಗಿದರೂ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ರಾಜ್ಯಪಾಲರಿಗೆ ವರದಿ ಕಳುಹಿಸಿದ್ದಾರೆ.
ಅನರ್ಹಗೊಂಡಿರುವ ಶಾಸಕರಾದಎಚ್.ವಿಶ್ವನಾಥ್, ಆರ್. ಶಂಕರ್ ಹೆಸರೂ ಲೋಕಾಯುಕ್ತರು ಕಳುಹಿಸಿರುವ ವರದಿಯಲ್ಲಿದೆ. ಇವರಿಬ್ಬರೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದಾರೆ. ವಿಶ್ವನಾಥ್ ಪುನಃ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಶಂಕರ್ ಸ್ಪರ್ಧಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಶಾಸಕರಲ್ಲಿ ಐವರು, ಹಿಂದಿನ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು.
ನವೆಂಬರ್ 30ರಂದು ಕಳುಹಿಸಿರುವ ವರದಿಯಲ್ಲಿ ಆಡಳಿತ ಪಕ್ಷ ಬಿಜೆಪಿಯ 7, ಕಾಂಗ್ರೆಸ್ನ 7, ಜೆಡಿಎಸ್ನ 4, ಬಿಎಸ್ಪಿಯ ಒಬ್ಬ ಸದಸ್ಯರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 22(2)ರ ಪ್ರಕಾರ ಜನಪ್ರತಿನಿಧಿಗಳು ಪ್ರತಿ ವರ್ಷ ಜುಲೈ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿಧಾನಸಭೆಯ ಸದ್ಯದ ಬಲ 208. ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 75.