ಬೆಳಗಾವಿ: ಠೇವಣಿ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಕೋ–ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ, ಅವರ ಪತ್ನಿ ಹಾಗೂ ನಿರ್ದೇಶಕಿ ಪ್ರೇಮಾ ಮತ್ತು ಕಾರ್ಯದರ್ಶಿ ಎಸ್. ಶರಣಗೌಡ ಅವರನ್ನು ಸೋಮವಾರ ತಡರಾತ್ರಿ ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅವರನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ (ನ್ಯಾಯಾಲಯ) ಅಧ್ಯಕ್ಷ ಬಿ.ವಿ. ಗುದ್ಲಿ ಡಿ. 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅಪ್ಪುಗೋಳ ಹಾಗೂ ಪ್ರೇಮಾ ಅವರಿಗೆ ಜಾಮೀನು ಕೋರಿ ಬುಧವಾರ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆಯನ್ನು ನ. 9ಕ್ಕೆ ಮುಂದೂಡಲಾಗಿದೆ.
‘ಎಚ್.ಎಚ್. ಉಳುವೆಪ್ಪ ಎನ್ನುವವರು ತಮಗೆ ಬರಬೇಕಾದ ₹ 2.43 ಲಕ್ಷ ಠೇವಣಿ ಹಣ ವಾಪಸ್ ಕೊಡಿಸುವಂತೆ ಹಾಗೂ ವಂಚಿಸಿರುವವರನ್ನು ಬಂಧಿಸುವಂತೆ ಕೋರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೊರೆ ಹೋಗಿದ್ದರು. ಇದನ್ನು ವಿಚಾರಣೆಗೆ ತೆಗೆದುಕೊಂಡು ವೇದಿಕೆಯು, ಅಪ್ಪುಗೋಳ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ವಿಳಂಬ ಮಾಡುತ್ತಿದ್ದುದ್ದರಿಂದ, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದುದ್ದರಿಂದ ಖಡೇಬಜಾರ್ ಠಾಣೆ ಇನ್ಸ್ಪೆಕ್ಟರ್ಗೆ ಕಾರಣಕೇಳಿ ನೋಟಿಸ್ ಜಾರಿಗೊಳಿಸಿತ್ತು. ಬಂಧನ ವಾರಂಟ್ ಕೂಡ ನೀಡಿತ್ತು. ಈ ನಡುವೆ, ನಾವು ಪೊಲೀಸರ ವಿರುದ್ಧ ಗೃಹ ಸಚಿವರಿಗೂ ಮನವಿ ಸಲ್ಲಿಸಿ ಕ್ರಮಕ್ಕೆ ಸೂಚಿಸುವಂತೆ ಕೋರಿದ್ದೆವು. ಇದಾದ ನಂತರ ಪೊಲೀಸರು ಅಪ್ಪುಗೋಳ ದಂಪತಿಯನ್ನು ನಗರದಲ್ಲಿಯೇ ಬಂಧಿಸಿದ್ದಾರೆ. ಕಾರ್ಯದರ್ಶಿ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿಲ್ಲ’ ಎಂದು ಪ್ರಕರಣದಲ್ಲಿ ಜಿ.ಎ. ಹಿರೇಮಠ ಜೊತೆ ಜಂಟಿ ವಕಾಲತ್ತು ವಹಿಸಿರುವ ವಕೀಲ ಎನ್.ಆರ್. ಲಾತೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬಹು ಕೋಟಿ ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪ ಅಪ್ಪುಗೋಳ ಮೇಲಿದೆ. ಹೋದ ದೀಪಾವಳಿ ಸಂದರ್ಭದಲ್ಲೂ ಅವರನ್ನು ಪೊಲೀಸರು ಬಂಧಿಸಿದ್ದರು. ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದರು.
ಸೊಸೈಟಿಯು ಉತ್ತರ ಕರ್ನಾಟಕದಲ್ಲಿ 50ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಅಧ್ಯಕ್ಷರು ಹೆಚ್ಚಿನ ಬಡ್ಡಿ ಹಣದ ಆಮಿಷವೊಡ್ಡಿ ನೂರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದರು. ಅವಧಿ ಮುಗಿದ ಬಳಿಕ ಗ್ರಾಹಕರಿಗೆ ಹಣ ಮರಳಿಸಿಲ್ಲ. 2017ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಅವರನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದಿದ್ದರು.
ಠೇವಣಿ ಹಣ ವಾಪಸ್ ಮಾಡುವಂತೆ ಆಗ್ರಹಿಸಿ ಗ್ರಾಹಕರು ವರ್ಷದಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.