ಬೆಂಗಳೂರು: ‘ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಖ್ಯಮಂತ್ರಿ ವಿಫಲ
ರಾಗಿದ್ದಾರೆ. ಸರ್ಕಾರದ ಈ ಧೋರಣೆ ವಿರೋಧಿಸಿ ಎರಡೂ ಪಕ್ಷಗಳ ಒಟ್ಟು 14 ಶಾಸಕರು ರಾಜೀನಾಮೆ ನೀಡಿದ್ದೇವೆ’ ಎಂದು ಶಾಸಕ ಎಚ್.ವಿಶ್ವನಾಥ್ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಕ್ಷಿಪ್ರ ಕ್ರಾಂತಿ ಹಿಂದೆ ಯಾರ ಕೈವಾಡ
ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಹೊರ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘ಕ್ಷಿಪ್ರ ಕ್ರಾಂತಿಯ ರೀತಿಯಲ್ಲಿ ಎರಡೂ ಪಕ್ಷಗಳ ಶಾಸಕರು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರದ ಬಗ್ಗೆ ರಾಜ್ಯದ ಜನ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ, ಎರಡೂ ಪಕ್ಷದ ಸದಸ್ಯರನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ಮತ್ತು ಸಮನ್ವಯ ಸಾಧಿಸುವಲ್ಲಿ ಸರ್ಕಾರ ವಿಫಲವಾಯಿತು. ಇದು ಅತ್ಯಂತ ಬೇಸರದ ಸಂಗತಿ’ ಎಂದು ಹೇಳಿದರು.
‘ಈ ಸರ್ಕಾರದಲ್ಲಿ ಶಿಕ್ಷಣ ವ್ಯವಸ್ಥೆ ಸತ್ತು ಹೋಯಿತು. ಶಿಕ್ಷಣ ಸಚಿವರ ಆಯ್ಕೆಯಲ್ಲೂ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿತು. ಈ ಎಲ್ಲದರ ಕುರಿತು ಈ ಹಿಂದೆಯೂ ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನಗಳನ್ನು ಹೊರ ಹಾಕಿದ್ದೇನೆ’ ಎಂದರು.
ಇದನ್ನೂ ಓದಿ:ಸದ್ದಿಲ್ಲದೇ ಖೆಡ್ಡಾಕ್ಕೆ ಕೆಡವಿತೇ ಬಿಜೆಪಿ
‘ಸರ್ಕಾರದ ಈ ನಡೆ, ಧೋರಣೆ ಮತ್ತು ನಿರ್ಲಕ್ಷ್ಯದ ವಿರುದ್ಧ ನಾವೆಲ್ಲರೂ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ. ಸ್ಪೀಕರ್ ಅವರು ಕೂಡಲೇ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ’ ಎಂದು ತಿಳಿಸಿದರು.
‘ಬಿಜೆಪಿ ಆಮಿಷಕ್ಕೆ ಒಳಗಾಗಿದ್ದೇವೆ ಎಂಬುದು ಮಾಧ್ಯಮಗಳ ಕಲ್ಪನೆ. ನಾವೆಲ್ಲರೂ ಹಿರಿಯರಿದ್ದೇವೆ. ಯಾರು ನಮ್ಮನ್ನು
ಆಪರೇಷನ್ ಮಾಡಲು ಆಗುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಆಸರೆ ನೀಡಿದವರನ್ನೇ ಕೈಬಿಟ್ಟ ಅಡಗೂರು
ಯಾವುದೇ ತ್ಯಾಗಕ್ಕೂ ಸಿದ್ಧ: ಡಿ.ಕೆ. ಶಿವಕುಮಾರ್
‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಲು ಸಚಿವರು ಸೇರಿದಂತೆ ಎಲ್ಲರೂ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದುಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
‘ಸಮಸ್ಯೆ ಇರಬಹುದು. ಆದರೆ, ಎಲ್ಲಾ ಸರಿಯಾಗಲಿದೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ರಾಜೀನಾಮೆ ಅಂಗೀಕಾರಕ್ಕೆ ಸಾಕಷ್ಟು ಪ್ರಕ್ರಿಯೆಗಳು ಇವೆ. ಏನಾಗುತ್ತದೆಯೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಮತ್ತೆ 10 ಶಾಸಕರಿಂದ ರಾಜೀನಾಮೆ ಪರ್ವ?
‘ರಾಜೀನಾಮೆ ನೀಡಲು ಮುಂದಾದ ಶಾಸಕರ ಜತೆ ಮಾತನಾಡಿದ್ದೇನೆ. ಅವರ ಮನವೊಲಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.ಬಿಜೆಪಿಯವರು ಏನೂ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಅವರು ಯಾವಯಾವ ಬಿಲ್ಡರ್ಗೆ ಕರೆ ಮಾಡಿ ಎಷ್ಟೆಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಿದೆ’ ಎಂದು ಹೇಳಿದರು.
‘ಮುನಿರತ್ನ ನನ್ನ 30–40 ವರ್ಷದ ಸ್ನೇಹಿತ. ಅವರ ರಾಜೀನಾಮೆ ಪತ್ರವನ್ನು ನಾನು ಹರಿದು ಹಾಕಿದ್ದು ನಿಜ. ಅವರು ಬೇಕಿದ್ದರೆ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಲಿ. ಜೈಲಿಗೆ ಹೋಗಲು ಸಿದ್ಧನಿದ್ದೇನೆ’ ಎಂದರು.
‘ರಾಜೀನಾಮೆವಾಪಸ್ ಇಲ್ಲ’
‘ಕೊಟ್ಟಿರುವ ರಾಜೀನಾಮೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ‘ನನ್ನ ರಾಜೀನಾಮೆಗೆ ಕಾರಣ ಏನು ಎಂಬುದು ಮಾಧ್ಯಮದವರಿಗೆ ಗೊತ್ತಿದೆ.ಸೌಮ್ಯಾ ರೆಡ್ಡಿ ರಾಜೀನಾಮೆ ನೀಡುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ’ ಎಂದರು.
‘ನಾನು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಬಿಡುವುದೂ ಇಲ್ಲ. ಅತೃಪ್ತರ ಜೊತೆಯಾಗಲಿ, ರಮೇಶ ಜಾರಕಿಹೊಳಿ ಜೊತೆಗಿರುವ ಶಾಸಕರ ಗುಂಪಿನಲ್ಲಾಗಲಿ ಗುರುತಿಸಿಕೊಂಡಿಲ್ಲ. ನಾನು ಏಕಾಂಗಿ’ ಎಂದು ಸ್ಪಷ್ಟಪಡಿಸಿದರು.
ರಾಜೀನಾಮೆ ಹಿಂದೆ ನಮ್ಮ ಪಾತ್ರ ಇಲ್ಲ: ಯಡಿಯೂರಪ್ಪ
‘ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ನಮ್ಮ ಪಾತ್ರ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
‘ನಾನು ಮತ್ತು ನಮ್ಮ ಪಕ್ಷದ ಮುಖಂಡರು ಇಂದು ಆರಂಭವಾದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಇದ್ದೇವೆ. ರಾಜೀನಾಮೆ ಪ್ರಹಸನವನ್ನು ಮಾಧ್ಯಮಗಳ ಮೂಲಕವೇ ತಿಳಿದುಕೊಂಡಿದ್ದೇವೆ’ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿ
ಸಿದ್ದಾರೆ.‘ರಾಜೀನಾಮೆ ಅಂಗೀಕಾರವಾದ ಬಳಿಕ ಪಕ್ಷದ ಮುಖಂಡರು ಮತ್ತು ಹೈಕಮಾಂಡ್ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
‘ಮತ್ತೊಂದು ವಿಷಯ ಏನೆಂದರೆ, ರಾಜ್ಯದ ಜನರು ಚುನಾವಣೆಗೆ ಸಿದ್ಧರಿಲ್ಲ. ಚುನಾವಣೆ ನಡೆದರೆ ರಾಜ್ಯದ ಬೊಕ್ಕಸಕ್ಕೂ ನಷ್ಟ’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ 105 ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮೇಲೆ ಇದೆ. ಅಂತಹ ಸಂದರ್ಭ ಬಂದರೆ ಸರ್ಕಾರ ರಚನೆ ಮಾಡಲು ಸಂವಿಧಾನದಲ್ಲಿರುವ ಅವಕಾಶಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದಿದ್ದಾರೆ.
ಸ್ಫೀಕರ್ ಕೊಠಡಿಗೆ ಹೋಗಿ ಶಾಸಕರೊಬ್ಬರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ. ಶಿವಕುಮಾರ್ ಹರಿದು ಹಾಕಿರುವುದು ಸರಿಯಲ್ಲ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘ಶಾಸಕರು ಅವರಿಗೆ ಎಷ್ಟೇ ಆಪ್ತರಾದರೂ ಈ ರೀತಿಯ ನಡವಳಿಕೆಯನ್ನು ಒಪ್ಪುವುದಿಲ್ಲ. ನಾವು ಖಂಡಿಸುತ್ತೇವೆ’ ಎಂದರು.
ಮಂಗಳವಾರ ಕಚೇರಿಗೆ ಹೋಗುತ್ತೇನೆ: ಸ್ಪೀಕರ್
‘ಶಾಸಕರು ರಾಜೀನಾಮೆ ನೀಡಿರುವ ಮಾಹಿತಿ ನನ್ನ ಕಚೇರಿಯಿಂದ ಬಂದಿದೆ. ನಾನು ಮಂಗಳವಾರ ಕಚೇರಿಗೆ ಹೋಗಲಿದ್ದು, ಅವುಗಳನ್ನು ಪರಿಶೀಲಿಸುತ್ತೇನೆ’ ಎಂದು ಸ್ಪೀಕರ್ ರಮೇಶ್ಕುಮಾರ್ ಸ್ಪಷ್ಟಪಡಿಸಿದರು.
‘ಎಲ್ಲರ ರಾಜೀನಾಮೆ ಪಡೆದು ಇಟ್ಟುಕೊಂಡು ಸ್ವೀಕೃತಿ ಪತ್ರ ಕೊಡಲು ಹೇಳಿದ್ದೇನೆ. ಶಾಸಕರು ರಾಜಭವನಕ್ಕೆ ಹೋದರೆ ಹೋಗಲಿ, ಯಾರು ಬೇಡ ಎನ್ನಲು ಆಗುವುದಿಲ್ಲ’ ಎಂದರು.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.