ಬೆಂಗಳೂರು:ಇಂದು ಮುಂಬಯಿನಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಘಟನೆಗಳು ಭಾರತೀಯ ಜನತಾ ಪಕ್ಷವು ಪ್ರಜಾಪ್ರಭುತ್ವದ ಎಲ್ಲ ಎಲ್ಲೆಗಳನ್ನೂ ಮೀರಿ ವರ್ತಿಸುತ್ತಿರುವುದು ಹಾಗೂ ನಾಗರಿಕ ಸಂಹಿತೆಯನ್ನೂ ಮೀರಿರುವುದು ಸ್ಪಷ್ಟ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಇಂದು ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇಂದು ಬೆಳಿಗ್ಗೆ ಮುಂಬಯಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ನನ್ನ ಸಹೋದ್ಯೋಗಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಜಿ.ಟಿ. ದೇವೇಗೌಡ ಮತ್ತು ಶಾಸಕರಾದ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮಹಾರಾಷ್ಟ್ರ ಸರ್ಕಾರ ವರ್ತಿಸಿರುವ ರೀತಿ ಖಂಡನೀಯ,’ ಎಂದು ಅವರು ಹೇಳಿದ್ದಾರೆ.
Manhandling Ministers and MLAs is very annoying and unbecoming of #MumbaiPolice. Such hasty Act by Maharashtra Government reinforces the suspicion on #BJP of #HorseTrading. This is a blackmark on the republic setup of our country.@CMOMaharashtra @narendramodi @Dev_Fadnavis
— H D Kumaraswamy (@hd_kumaraswamy) July 10, 2019
‘ಜನಪ್ರತಿನಿಧಿಗಳು, ಅದರಲ್ಲೂ ಸಚಿವರು ಹಾಗೂ ಶಾಸಕರನ್ನು ಬೀದಿಯಲ್ಲಿ ನಿಲ್ಲಿಸಿ ಕಸ್ಟಡಿಗೆ ತೆಗೆದುಕೊಂಡಿರುವುದು ಮತ್ತು ಅಪರಾಧಿಗಳಂತೆ ಅವರನ್ನು ನಡೆಸಿಕೊಂಡಿರುವುದು ಶಿಷ್ಟಾಚಾರದ ಉಲ್ಲಂಘನೆ ಮಾತ್ರವಲ್ಲ, ಪಾಳೇಗಾರಿಕೆಯ ಮನೋಭಾವದ ಅನಾವರಣವಾಗಿದೆ. ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ನೆರೆಯ ರಾಜ್ಯದ ಸಚಿವರಿಗೆ , ಶಾಸಕರಿಗೆ ರಕ್ಷಣೆ ನೀಡಬೇಕಿತ್ತು. ಆದರೆ ಅವರನ್ನು ಅಗೌರವದಿಂದ ಕಂಡಿರುವುದು ಸಮಂಜಸವಲ್ಲ. ಮಹಾರಾಷ್ಟ್ರ ಸರ್ಕಾರವು ನೆರೆಯ ರಾಜ್ಯದ ಸರ್ಕಾರವನ್ನು ಅಭದ್ರಗೊಳಿಸಲು ಸಹಕಾರ ನೀಡುತ್ತಿರುವುದು ಇದರಿಂದ ದೃಢಪಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಹೋಟೆಲ್ನಲ್ಲಿ ಗೃಹಬಂಧನದಲ್ಲಿಡಲು ಮಹಾರಾಷ್ಟ್ರ ಸರ್ಕಾರ ಬಿಜೆಪಿಗೆ ಸಹಕಾರ ನೀಡಿರುವುದು ಇದರಿಂದ ಸಂಪೂರ್ಣ ಸ್ಪಷ್ಟ,’ ಎಂದು ಅವರು ಮಹಾರಾಷ್ಟ್ರದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
‘ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ದುಂಡಾವರ್ತಿಯ ನಡವಳಿಕೆ ಜಿಗುಪ್ಸೆ ಹುಟ್ಟಿಸುವಂತದ್ದು. ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕರೊಂದಿಗೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ವರ್ತಿಸಿದ ರೀತಿ ವಿಧಾನಸೌಧಕ್ಕೆ ಅಷ್ಟೇ ಅಲ್ಲ, ಕರ್ನಾಟಕ ರಾಜಕಾರಣದ ಶ್ರೇಷ್ಠ ಪರಂಪರೆಗೂ ಮಸಿ ಬಳಿದಿದೆ,’ಎಂದು ಇಂದಿನ ಘಟನಾವಳಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
‘ಇಡೀ ರಾಷ್ಟ್ರ ಗಮನಿಸುತ್ತಿದೆ ಎಂಬ ಪರಿವೆಯೂ ಇಲ್ಲದೆ ಲಜ್ಜಾಹೀನರಾಗಿ ವರ್ತಿಸಿರುವುದು ಬೇಸರ ಉಂಟು ಮಾಡಿದೆ. ಇವರ ಅಧಿಕಾರದ ಹಪಾಹಪಿಯಿಂದ ನಡೆದ ಘಟನಾವಳಿಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ನಗೆಪಾಟಲಿಗೀಡಾಗಿದೆ. ಬಿಜೆಪಿ ನಡೆಸುತ್ತಿರುವುದು ಪ್ರಜಾಪ್ರಭುತ್ವ ರಾಜಕಾರಣವೋ ಅಥವಾ ದಮನಕಾರಿ ಮನೋಭಾವದ ವಿಕೃತ ಪ್ರದರ್ಶನವೋ?,’ ಎಂದು ಅವರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.