ನವದೆಹಲಿ: ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರ ಕೆಡವಿದ್ದರ ಹಿಂದಿನ ರಹಸ್ಯದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೊ ಆಧಾರವಾಗಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಕಾಂಗ್ರೆಸ್ ಮನವಿ ಮಾಡಿದೆ.
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದೆದುರು ಸೋಮವಾರ ಬೆಳಿಗ್ಗೆ ಈ ಕುರಿತು ಕಾಂಗ್ರೆಸ್ ಮೌಖಿಕ ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿರುವ ಆದೇಶ ಸರಿ ಎಂದು ಹೇಳಿದರು.
ಈಗಾಗಲೇ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಇದೇ ಪೀಠ ತೀರ್ಪು ಕಾದಿರಿಸಿದ್ದು, ಇದೇ ವಾರ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಆದರೆ, ‘ನಮ್ಮ ವಾದ ಪರಿಗಣಿಸಿ ಪ್ರತ್ಯೇಕ ಪೀಠದೆದುರು ಈ ಕುರಿತು ವಿಚಾರಣೆ ನಡೆಯಬೇಕು’ ಎಂದು ಸಿಬಲ್ ಕೋರಿದರು.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತಂದು ವಿಚಾರಣೆ ನಡೆಸಬೇಕು ಎಂದು ಕೋರಲಾಗುತ್ತದೆ. ಅವರು ಅನುಮತಿ ನೀಡಿದರೆ ವಿಚಾರಣೆ ಆರಂಭಿಸಲಾಗುವುದು ಎಂದು ನ್ಯಾಯಮೂರ್ತಿ ರಮಣ ತಿಳಿಸಿದರು.