ಮಡಿಕೇರಿ: ರಾಜ್ಯದ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ನಕ್ಸಲ್ ನಾಯಕ ರೂಪೇಶ್ನನ್ನು ಪೊಲೀಸ್ ಭದ್ರತೆ ನಡುವೆ ಸೋಮವಾರ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
2011 ಹಾಗೂ 2013ರಲ್ಲಿ ಕೊಡಗು ಜಿಲ್ಲೆಯ ಕಾಲೂರು, ಚೇರಂಬಾಣೆ, ಭಾಗಮಂಡಲದಲ್ಲಿ ರೂಪೇಶ್ ನೇತೃತ್ವದ ತಂಡವು ಕೆಲವು ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹಿಸಿತ್ತು. ಸ್ಥಳದಲ್ಲಿ ನಕ್ಸಲ್ ಕರಪತ್ರಗಳೂ ಬಿದ್ದಿದ್ದವು ಎಂದು ಪೊಲೀಸರು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಕೇರಳ ಹಾಗೂ ಕೊಡಗು ನಕ್ಸಲ್ ನಿಗ್ರಹ ಪಡೆಯ ಭದ್ರತೆಯಲ್ಲಿ ನ್ಯಾಯಾಧೀಶರಾದ ವೀರಭದ್ರಪ್ಪ ಮಲ್ಲಪ್ಪ ಅವರ ಎದುರು ಹಾಜರು ಪಡಿಸಲಾಯಿತು. ಮುಂದಿನ ವಿಚಾರಣೆಯನ್ನು ನ. 27ಕ್ಕೆ ಮುಂದೂಡಲಾಯಿತು.
ನಾಲ್ಕು ವರ್ಷಗಳ ಹಿಂದೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರೂಪೇಶ್ನನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.