ಬೆಂಗಳೂರು: ನವಜಾತ ಶಿಶುವನ್ನು ಬ್ಯಾಗ್ನಲ್ಲಿ ಹಾಕಿ ರಾಜರಾಜೇಶ್ವರಿ ನಗರದ ಬಿ.ಎಚ್.ಎಲ್ ವಾಟರ್ ಟ್ಯಾಂಕ್ ಬಳಿ ಇಟ್ಟು ಹೋಗಿರುವ ಪ್ರಕರಣ ಸೋಮವಾರ ನಡೆದಿದೆ.
ಮನೆ ಗೆಲಸಕ್ಕೆ ಹೋಗುತ್ತಿದ್ದ ಯಶೋದಮ್ಮ ಮತ್ತು ಬೈರಮ್ಮ ಅವರು ವಾಟರ್ ಟ್ಯಾಂಕ್ ಬಳಿ ಬಂದಾಗ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ಸಮೀಪ ಹೋಗಿ ನೋಡಿದಾಗ ವೈರ್ನಿಂದ ಹೆಣೆದಿರುವ ಬ್ಯಾಗೊಂದರಲ್ಲಿ ನವಜಾತ ಹೆಣ್ಣು ಶಿಶು ಇರುವುದು ಗೊತ್ತಾಗಿದೆ.
ತಕ್ಷಣವೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಶಿಶುವನ್ನು ರಕ್ಷಣೆ ಮಾಡಿದೆ.
ಶಿಶುವನ್ನು ಬಿಟ್ಟು ಹೋದವರನ್ನು ಪತ್ತೆ ಮಾಡಿ, ಕ್ರಮಕೈಗೊಳ್ಳಬೇಕು ಎಂದು ಯಶೋದಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.