ಕುಶಾಲನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ದುಬಾರೆ ಸಾಕಾನೆ ಶಿಬಿರದ 6 ಆನೆಗಳ ತಂಡ ಗುರುವಾರ ಸಂಜೆ ಶಿಬಿರಕ್ಕೆ ಮರಳಿ ಬಂದಿವೆ.
ದುಬಾರೆ ಸಾಕಾನೆ ಶಿಬಿರದ ಒಟ್ಟು 6 ಆನೆಗಳು ದಸರಾದಲ್ಲಿ ಪಾಲ್ಗೊಂಡು ದಸರಾ ಯಶಸ್ವಿಗೆ ಕಾರಣವಾಗಿದ್ದು, ದುಬಾರೆ ಆನೆಗಳು ಮೆಚ್ಚುಗೆಗೆ ಪಾತ್ರವಾಗಿವೆ. ಎಲ್ಲ ಆನೆಗಳನ್ನು ಮೈಸೂರಿನಿಂದ ಲಾರಿಗಳಲ್ಲಿ ತಂದು ಆನೆಕಾಡು ಅರಣ್ಯದ ಶಿಬಿರಕ್ಕೆ ತರಲಾಯಿತು.
ವಿಕ್ರಂ ಮತ್ತು ವಿಜಯ, ಈಶ್ವರ, ಗೋಪಿ, ಧನಂಜಯ, ಕಾವೇರಿ ಆನೆಗಳು ಹಾಗೂ ಮಾವುತರು, ಕಾವಾಡಿಗರ ಕುಟುಂಬ ವರ್ಗ ದಸರಾದಲ್ಲಿ ಪಾಲ್ಗೊಂಡು ಒಂದು ತಿಂಗಳ ಬಳಿಕ ಮರಳಿ ತಮ್ಮ ಶಿಬಿರಗಳಿಗೆ ಬಂದಿವೆ.
ದಸರಾದಲ್ಲಿ ಪಾಲ್ಗೊಂಡು ಹಿಂದಿರುಗಿದ ಎಲ್ಲಾ ಆನೆಗಳು ಆರೋಗ್ಯಕರವಾಗಿವೆ ಎಂದು ಆನೆಕಾಡು ಅರಣ್ಯ ವಿಭಾಗದ ಅಧಿಕಾರಿ ರಂಜನ್ ಮಾಹಿತಿ ನೀಡಿದ್ದಾರೆ.